*ನಾಮಫಲಕದ ಸಿಮೆಂಟ್ ಬೋರ್ಡ್ ಕುಸಿದು ಬಿದ್ದು ಇಬ್ಬರು ಮಕ್ಕಳು ಸಾವು: ಇಬ್ಬರ ಕಾಲು ಕಟ್*

ಪ್ರಗತಿವಾಹಿನಿ ಸುದ್ದಿ: ಬಯಲಾಟದ ವೇಳೆ ಕಟ್ಟಡದ ನಾಮಫಲಕದ ಸಿಮೆಂಟ್ ಬೋರ್ಡ್ ಕುಸಿದು ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಬೈಲ್ ಮರ್ಚಡ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಯಲಾಟವನ್ನು ನೋಡಲು ಗ್ರಾಮಸ್ಥರೆಲ್ಲರೂ ಸಂಭ್ರಮದಿಂದ ಜಮಾಯಿಸಿದ್ದರು. ಈ ವೇಳೆ ಅನೇಕರು ಗ್ರಾಮದ ಚಾವಡಿ ಕಟ್ಟೆಯ ಕೆಳಗೆ ಕುಳಿತು ನಾಟಕ ವೀಕ್ಷಿಸುತ್ತಿದ್ದರು. ಹಳೆಯದಾಗಿದ್ದ ಚಾವಡಿ ಕಟ್ಟಡದ ಮೇಲ್ಭಾಗದಲ್ಲಿದ್ದ ಸಿಮೆಂಟ್ನ ನಾಮಫಲಕದ ಬೋರ್ಡ್ ಆಯತಪ್ಪಿ ಕೆಳಗೆ ಕುಳಿತಿದ್ದವರ ಮೇಲೆ ಬಿದ್ದಿದೆ.
ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರನ್ನು ವಿಶ್ವನಾಥ್ (8 ವರ್ಷ) ಹಾಗೂ ಸನ್ವಿತಾ (1.6 ವರ್ಷ) ಎಂದು ಗುರುತಿಸಲಾಗಿದೆ. ದುರಂತದ ತೀವ್ರತೆಗೆ ಸಿಮೆಂಟ್ ಬೋರ್ಡ್ ಅಡಿಯಲ್ಲಿ ಸಿಲುಕಿದ ಬಸಮ್ಮ (38) ಅವರ ಒಂದು ಕಾಲು ಕಟ್ ಆಗಿದ್ದರೆ, ಅವರ ಮಗಳು ಲಕ್ಷ್ಮಿ (17) ಅವರ ಎರಡು ಕಾಲುಗಳು ಕಟ್ ಆಗಿವೆ. ಇವರ ಜೊತೆಗೆ ವಿಶಾಲಮ್ಮ (20) ಮತ್ತು 4 ವರ್ಷದ ಮಗು ಯಲ್ಲಮ್ಮ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

