Karnataka News

*ವಿಕಸಿತ ಭಾರತ ಮಾಡಲು ರೈಲ್ವೆ ಪಾತ್ರ ದೊಡ್ಡದು: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಭಾರತವನ್ನು ವಿಕಸಿತ ಭಾರತ ಮಾಡುವಲ್ಲಿ ರೈಲ್ವೆ ಪಾತ್ರ ದೊಡ್ಡದು ಅದನ್ನು ಅರಿತು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ರೈಲು ಮತ್ತು ರಸ್ತೆ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಏರ್ಪಡಿಸಿದ್ದ ಅಮೃತ ಭಾರತ ಯೋಜನೆ ಅಡಿಯಲ್ಲಿ ನವಿಕರಣಗೊಂಡಿರುವ ಗದಗ ರೈಲ್ವೆ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಪರೆನ್ಸ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಐತಿಹಾಸಿಕ ಗದಗಿನ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಸುಮಾರು 23 ಕೋಟಿ  ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿದ್ದು ಸಂತಸ ಸಂಭ್ರಮ ತಂದಿದೆ. ಗದಗ ಐತಿಹಾಸಿಕ ನಾಡು ಪುಣ್ಯಾಶ್ರಮ, ಕುಮರವ್ಯಾಸರ ನಾಡು, ಮುದ್ರಣ ಕಾಶಿಯಾಗಿ ಪ್ರಸಿದ್ದಿ ಪಡೆದಿದೆ. ಬೆಟಗೇರಿ ಕೈಮಗ್ಗಗಳಿಗೆ ಪ್ರಸಿದ್ದಿಯಾಗಿದೆ. ಕೈಗಾರಿಕೆ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಬಹಳ ದೊಡ್ಡ ಇಂಬು ಕೊಡುವ ಮೂಲಕ  ಅಭಿವೃದ್ಧಿಗೆ ಆದ್ಯತೆ ನೀಡಿದ್ದು  ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಗದಗನಿಂದ ಹುಬ್ಬಳ್ಳಿಗೆ 1884 ರಲ್ಲಿ ಮೊದಲ ರೈಲು ಆರಂಭದವಾಗಿದೆ.‌ ಸುದೀರ್ಘವಾದ ಪ್ರಯಾಣ ಈ ನಿಲ್ದಾಣ ಮಾಡಿದೆ. ಈ ರೈಲ್ವೆ ನಿಲ್ದಾಣದಿಂದ ಪ್ರತಿ ದಿನ 5000 ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಈ ನಿಲ್ದಾಣವನ್ನು ಅಮೃತ್ ಯೋಜನೆ ಅಡಿಯಲ್ಲಿ  ಎಸ್ಕಲೇಟರ್, ಲಿಪ್ಟ್, ಓವರ್  ಬ್ರಿಡ್ಜ್, ಫುಟ್ ಓವರ್ ಬ್ರಿಡ್ಜ್, ಶೌಚಾಲಯ, ಪ್ರಯಾಣಿಕರಿಗೆ ಎಲ್ಲ ರೀತಿಯ ಸವಲತ್ತು ನೀಡಲಾಗುತ್ತಿದೆ ಎಂದರು.

ಗದಗ ವಾಡಿ ರೈಲ್ವೆ ಲೈನ್ ಯೋಜನೆ ನಡೆಯುತ್ತಿದೆ. ಅದು ಪೂರ್ಣವಾದರೆ ಹೈದರಾಬಾದ್ ಸಂಪರ್ಕ ಅನುಕೂಲವಾಗಲಿದೆ. ಇನ್ನೊಂದು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆಯಿಂದ ಗದಗ ಯಲವಿಗೆವರೆಗೆ ಹೊಸ ಮಾರ್ಗ ಅನುಮೋದನೆಯಾಗಿದೆ. ಈ ಸಂಪರ್ಕ ಜೊಡಣೆಯಾದರೆ ಹಾವೇರಿ, ಗದಗ ಮೂಲಕ ಹೈದರಾಬಾದ್ ಹೋಗಲು ಅನುಕೂಲವಾಗಲಿದೆ. ನರೇಂದ್ರ ಮೋದಿ ಸರ್ಕಾರ ರೈಲ್ವೆ ಇಲಾಖೆಯಲ್ಲಿ ಬ್ರಾಡ್ಗೇಜ್, ಡಬಲ್ ಗೇಜ್, ಎಲೆಕ್ಟ್ರಿಪಿಕೇಶನ್ ಮತ್ತು ಸಿಗ್ನಲ್ ಗಳನ್ನು ಆಧುನಿಕರಣ ಮಾಡಿ  ಅತಿ ವೇಗದ  ಸುಮಾರು 500 ಕ್ಕೂ ಹೆಚ್ಚು  ವಂದೇ ಭಾರತ ರೈಲುಗಳು ದೇಶದಲ್ಲಿ ಸಂಚರಿಸುವ ಮೂಲಕ ರೈಲ್ವೆಯಲ್ಲಿ ದೊಡ್ಡ ಕ್ರಾಂತಿಯಾಗುತ್ತಿದೆ. ಇದನ್ನು ಜನಾನುರಾಗಿ ಮಾಡುವುದು, ವಾಣಿಜ್ಯಾಭಿವೃದ್ದಿ ಮಾಡುವುದು, ನಮ್ಮ ಭಾರತವನ್ನು ವಿಕಸಿತ ಭಾರತ ಮಾಡುವಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ಮು ಅರಿತು ರೈಲ್ವೆ ಮತ್ತು ರಸ್ತೆಗಳ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ. ಇಷ್ಟೆಲ್ಲ ಅಭಿವೃದ್ಧಿ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ತುಂಬು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

Home add -Advt

Related Articles

Back to top button