*ಮಳೆಗಾಗಿ ಪ್ರಾರ್ಥನೆ; ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರಿಂದ ಹನುಮಾನ್ ಚಾಲೀಸಾ ಪಠಣ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಳೆಗಾಗಿ ಪ್ರಾರ್ಥಿಸಿ ಇಲ್ಲಿನ ಅಶೋಕ ನಗರದ ಗಣೇಶ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ 11 ಸಲ ಸಾಮೂಹಿಕವಾಗಿ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮ ನಡೆಯಿತು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಠದ ಶಿವಸಿದ್ಧಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಗಣಿಕೊಪ್ಪದ ಸಿದ್ಧನಕೊಳ್ಳದ ಗಂಗಾಧರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.

ಹನುಮಂತ ಉಪ್ಪಾರ, ಶೈಲೇಶ ಕಾಂಬಳೆ, ಯೋಗೀಶ ಕರಗುದ್ರಿ, ಆನಂದ ಕರಲಿಂಗನವರ, ಕೃಷ್ಣ ಭಟ್,ಹೀಗೆ ನೂರಾರು ದಂಪತಿಗಳು,ಗಣಪತಿ ದೇವಸ್ಥಾನದ ಎಲ್ಲಾ ವಿಶ್ವಸ್ಥ ಮಂಡಳಿ ಸದಸ್ಯರು ಪೂಜೆಯಲ್ಲಿ ಭಾಗವಹಿಸಿದ್ದರು. ಆದಿನಾಥ ಗಾವಡೆ, ಉಮೇಶ ಚಿಂಡಕ, ನಾಗೇಶ ಕಾಂಬಳೆ ಸೇರಿದಂತೆ 100ಕ್ಕೂ ಅಧಿಕ ಕಾರ್ಯಕರ್ತರು 11 ಸಲ ಹನುಮಾನ ಚಾಲೀಸಾ ಪಠಿಸಿದರು.
‘ಭಕ್ತಿಯಿಂದ ಮಾಡಿದ ಪೂಜೆ ಎಂದಿಗೂ ವ್ಯರ್ಥವಾಗದು. ಹನುಮಂತನ ಕೃಪೆಯಿಂದ ಉತ್ತಮ ಮಳೆಯಾಗಲಿದೆ. ಜನರ ಬದುಕು ಸಮೃದ್ಧಿಯಾಗಲಿದೆ’ ಎಂದು ಮೂವರು ಶ್ರೀಗಳು ಹೇಳಿದರು. ಸಂಸದೆ ಮಂಗಲಾ ಅಂಗಡಿ ಇತರರಿದ್ದರು.
ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಧಾರ್ಮಿಕ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ವರುಣನ ಕೃಪೆಯಿಂದ ಮಳೆಯೂ ಆಯಿತು.




