
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉಗ್ರರ ನಿಗ್ರಹಕ್ಕಾಗಿ ಆಪರೇಶನ್ ಸಿಂಧೂರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿದ್ದಕ್ಕಾಗಿ ಮಾಜಿ ಸಂಸದ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಕೇಂದ್ರ ಸರಕಾರ ಮತ್ತು ಭಾರತೀಯ ಸೇನೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡಿದ ಉಗ್ರರನ್ನು ದಮನಗೊಳಿಸುವಲ್ಲಿ ಭಾರತೀಯ ವಾಯು ಸೇನೆ ಅಭಿನಂದನಾರ್ಹ ಕಾರ್ಯ ಮಾಡಿದೆ ಎಂದಿದ್ದಾರೆ.
‘ಆಪರೇಷನ್ ಸಿಂಧೂರ ಭಾರತೀಯನ ಹೃದಯದಲ್ಲಿ ಕುದಿಯುತ್ತಿದ್ದ ಪ್ರತೀಕಾರಕ್ಕೆ ತಕ್ಕ ಉತ್ತರ ನೀಡಿದೆ. ಭಾರತ ಶಾಂತಿಪ್ರಿಯ ದೇಶ. ಆದರೆ ಇಂತಹ ದೇಶದಲ್ಲಿ ರಕ್ತದ ಓಕುಳಿಯನ್ನು ಹರಿಸಿ ಸಿಂಧೂರನ್ನು ಅಳಿಸಿದ ರಕ್ತ ಪಿಪಾಸುಗಳಿಗೆ ದಿಟ್ಟ ಉತ್ತರ ನಮ್ಮ ಸೈನ್ಯ ನೀಡಿದೆ ಎಂದು ಕೋರೆ ಹೇಳಿದ್ದಾರೆ.
ಉಗ್ರವಾದವನ್ನು ದಮನಗೊಳಿಸುವಲ್ಲಿ ನರೇಂದ್ರ ಮೋದಿಯವರ ಸರ್ಕಾರದ ಈ ಕ್ರಮಕ್ಕೆ ದೇಶದ ಜನತೆ ಮಾತ್ರವಲ್ಲ, ಜಗತ್ತಿನ ಅಸಂಖ್ಯ ರಾಷ್ಟ್ರಗಳು ಬೆನ್ನಿಗೆ ನಿಂತಿವೆ. ಇದು ಪ್ರಾರಂಭವಷ್ಟೆ. ಮುಂಬರುವ ದಿನಗಳಲ್ಲಿ ಉಗ್ರರನ್ನು ಸರ್ಕಾರ ಹೆಡಮೂರಿ ಕಟ್ಟಲಿದೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲಿದೆ ಎನ್ನುವ ವಿಶ್ವಾಸವನ್ನು ಪ್ರಭಾಕರ ಕೋರೆ ವ್ಯಕ್ತಪಡಿಸಿದ್ದಾರೆ.