*ಮುಂದೆ ಸಿಎಂ ಸಿದ್ದರಾಮಯ್ಯ ಸಿಡಿಯೂ ಹೊರಬರಬಹುದು; ಮಾಜಿ ಸಚಿವ ರಮೇಶ್ ಜರಕಿಹೊಳಿ*
![](https://pragativahini.com/wp-content/uploads/2021/03/ramesh-jarakiholi.jpg)
ಪ್ರಗತಿವಾಹಿನಿ ಸುದ್ದಿ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮುಂದೆ ಸಿಎಂ ಸಿದ್ದರಾಮಯ್ಯ ಅವರ ಸಿಡಿಯೂ ಹೊರಬರಬಹುದು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯ ಗೋಕಾಕ್ ನಲ್ಲಿ ಲೋಕಸಭಾ ಚುನಾವಣೆ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಇಂದು ಒಬ್ಬರ ವಿಡಿಯೋ ಪ್ರಕರಣ ಹೊರಬಂದಿದೆ. ಮುಂದೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರ ಸಿಡಿಯೂ ಹೊರಬರಬಹುದು. ಇಂತವುಗಳಿಗೆ ಪಕ್ಷಾತೀತವಾಗಿ ಅಂತ್ಯ ಹಾಡಬೇಕು ಎಂದು ಹೇಳಿದರು.
ನಾನು ಮೊದಲಿನಿಂದಲೂ ಸಿಡಿ ಬಗ್ಗೆ ಹೇಳಿಕೊಂಡೇ ಬಂದಿದ್ದೇನೆ. ಆಗ ಎಲ್ಲರೂ ನನ್ನ ಮಾತು ನಿರ್ಲಕ್ಷ್ಯ ಮಾಡಿದರು. ಕೆಲವರು ನಕ್ಕರು. ಈಗ ಒಬ್ಬರಿಗೆ ಆಗಿದೆ. ಮುಂದೆ ಇದೇ ರೀತಿ ಬೇರೆಯವರಿಗೂ ಆಗಬಹುದು. ಸಿದ್ದರಾಮಯ್ಯ, ಪರಮೇಶ್ವರ್ ಅವರ ಸಿಡಿಯೂ ಹೊರಬರಬಹುದು. ಹಾಗಾಗಿ ನಾನು ಸಿಎಂ ಸಿದ್ದರಾಮಯ್ಯನವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮೊದಲು ಇಂತಹ ಪ್ರಕರಣಗಳಿಗೆ ಪಕ್ಷಾತೀತವಾಗಿ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದಿದ್ದಾರೆ.