*ಯತ್ನಾಳ ಉಚ್ಛಾಟನೆಗೆ ರಮೇಶ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಟ್ಟ ಘಳಿಗೆ, ಏನೋ ಆಗಿದೆ. ಯತ್ನಾಳ ಉಚ್ಛಾಟನೆ ರದ್ದು ಮಾಡಿಸುತ್ತೇವೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ. ಈಗ ಬೇರೇನೂ ಮಾತನಾಡುವುದಿಲ್ಲ. ದಯವಿಟ್ಟು ವಿವಾದ ಮಾಡಬೇಡಿ – ಇದು ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಉಚ್ಛಾಟನೆಗೆ ಮಾಜಿ ಸಚಿವ ರಮೇಶ ಜಾರಕಿಹೊಳಿಮೊದಲ ಪ್ರತಿಕ್ರಿಯೆ.
ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯತ್ನಾಳ ಉಚ್ಛಾಟನೆ ರದ್ದುಪಡಿಸುವ ವಿಶ್ವಾಸ ವ್ಯಕ್ತಪಡಿಸಿದರು. ಇದು ನಮಗೆ ಮೊದಲೇ ಗೊತ್ತಿತ್ತು. ನೋಟೀಸ್ ಕೊಟ್ಟಾಗಲೇ ವಾಸನೆ ಬಡಿದಿತ್ತು ಎಂದೂ ಹೇಳಿದರು.
ಜನರ ಭಾವನೆ ತಿಳಿದುಕೊಂಡು ಮಾತನಾಡೋಣ ಎಂದು ನಿನ್ನೆ ಮಾತನಾಡಿಲ್ಲ. ಯತ್ನಾಳ ದೊಡ್ಡ ನಾಯಕರು. ಇಂದೂ ನಮ್ಮ ನಾಯಕರು. ಪಕ್ಷ ಯಾಕೆ ಇಂತಹ ನಿರ್ಣಯ ತೆಗೆದುಕೊಂಡಿದೆ ಗೊತ್ತಿಲ್ಲ. ಅವರು ಇಂದು ರಾತ್ರಿ ಬೆಂಗಳೂರಿಗೆ ಬರುತ್ತಾರೆ. ನಾನೂ ಬೆಂಗಳೂರಿಗೆ ತೆರಳುತ್ತೇನೆ. ನಾಳೆ ಸಭೆ ಮಾಡುತ್ತೇವೆ. ಯತ್ನಾಳ ಉಚ್ಛಾಟನೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡುತ್ತೇವೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಇದು ಆಗಬಾರದಿತ್ತು. ಮನಸ್ಸಿಗೆ ನೋವಾಗಿದೆ. ಎಲ್ಲವನ್ನೂ ಸರಿಪಡಿಸುತ್ತೇವೆ. ವಿಜಯೇಂದ್ರ ಬಗ್ಗೆ ಏನೂ ಮಾತನಾಡುವುದಿಲ್ಲ. ಇವತ್ತು ಏನೂ ಬೇಡ. ವಿವಾದ ಮಾಡಬೇಡಿ ಎಂದು ಮನವಿ ಮಾಡಿದರು.