Latest

ಸಮರ್ಪಕ ಕಾನೂನುಗಳು ಇದ್ದರೂ ಸಮಾಜದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ

ಪ್ರಗತಿವಾಹಿನಿ ಸುದ್ದಿ, ದಾವಣಗೇರೆ -೧೨ ನೇ ಶತಮಾನದ ಬಸವಣ್ಣ ಮತ್ತು ೨೦ನೇ ಶತಮಾನದ ಪ್ರಜಾಪಿತ ಬ್ರಹ್ಮಾರವರು ಮಾಡಿದ ಸೃಷ್ಟಿ-ಪರಿವರ್ತನೆಯ ಕಾರ್ಯವನ್ನು ನಿವೃತ್ತ ಹೈಕೋರ್ಟ ನ್ಯಾಯಾಧೀಶರಾದ ಎ. ಎಸ್. ಪಾಚ್ಚಾಪುರೆ ಮುಕ್ತ ಕಂಠದಿಂದ ಶ್ಲಾಘಿಸಿದರು.

ಅವರು ದಾವಣಗೆರೆಯ ಬ್ರಹ್ಮಕುಮಾರಿ ಸಂಸ್ಥೆಯು ಆಯೋಜಿಸಿದ್ದ ’ಶ್ರೇಷ್ಠ ಜಗತ್ತಿನ ನಿರ್ಮಾಣದಲ್ಲಿ ಕಾನೂನು ತಜ್ಞರ ಪಾತ್ರ’ ಎಂಬ ಕಾರ್ಯಾಗಾರದಲ್ಲಿ ದೀಪ ಬೆಳಗಿಸಿ ಮಾತನಾಡಿದರು.

’ದೇವಸ್ಥಾನ, ಪ್ರಾರ್ಥನಾ ಮಂದಿರ, ಕ್ರೈಸ್ತ ದೇವಾಲಯ ಮುಂತಾದವುಗಳಲ್ಲಿ ಹೋದಾಗ ಪವಿತ್ರ ಭಾವನೆ ಬರುತ್ತದೆ. ಹಾಗೆಯೇ ಸರಕಾರಿ ಕಚೇರಿಗಳಿಗೆ ಹೋದಾಗ, ಅದೇ ವಾತಾವರಣದ ಅನುಭವವಾಗಬೇಕೆಂದು ನುಡಿದರು.

ಸಮರ್ಪಕ ಕಾನೂನುಗಳು ಇದ್ದರೂ ಸಮಾಜದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ.  ಮನುಷ್ಯನಿಗೆ ಎಷ್ಟು ಇದ್ದರೂ ಸಾಲದು, ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಇವತ್ತಿನ ಅವಶ್ಯಕತೆಯಾಗಿದೆ. ರಾಜಯೋಗದಿಂದ ಇದು ಸಾಧ್ಯವಾಗಿದ್ದು, ಎಲ್ಲರೂ ಇದನ್ನು ಕಲಿಯಬೇಕೆಂದು ಕರೆ ನೀಡಿದರು.

Home add -Advt

ಶ್ರೇಷ್ಠ ಜಗತ್ತಿನ ನಿರ್ಮಾಣದ ಕಾರ್ಯದಲ್ಲಿ ಈಶ್ವರೀಯ ನಿಯಮಗಳು ಮುಖ್ಯ ಪಾತ್ರವಹಿಸುತ್ತಿದ್ದು, ಇಲ್ಲಿ ಪ್ರತಿಯೊಬ್ಬರ ಮನಸ್ಸಿನ ಉನ್ನತ ಸ್ಥಿತಿ ಪ್ರಮುಖವಾಗಿದೆ. ಆಧ್ಯಾತ್ಮಿಕ ಮಾರ್ಗದಲ್ಲಿ ಬ್ರಹ್ಮಾಕುಮಾರಿ ಸಂಸ್ಥೆ ನಡೆದು ಬಂದಿದೆ ಎಂದು  ಶಿರಸಿಯ ಸಂಚಾಲಕರಾದ ವೀಣಾ  ಅವರು   ಪ್ರಾಸ್ತಾವಿಕ ಭಾಷಣದಲ್ಲಿ ಹೇಳಿದರು.

’ಕಾನೂನು ಇಲ್ಲದೇ ನಾವು ಬದುಕಲು ಅಸಾಧ್ಯವಾಗಿದ್ದು, ಪುಸ್ತಕದಲ್ಲಿ ಇರುವುದು ಮಾತ್ರ ಕಾನೂನಲ್ಲ,’ ನಾವು ಕಾನೂನುಗಳನ್ನು ಸಾಧ್ಯವಾದಷ್ಟು ಪಾಲಿಸಬೇಕೆಂದು ಐಜಿಪಿ ಅಮೃತಪಾಲ್  ಹೇಳಿದರು.

ನಾನು ನಿಮಿತ್ತ ಮಾತ್ರ ಎಂದು ತಿಳಿದು ನ್ಯಾಯವನ್ನು ನೀಡುತ್ತೇನೆ. ಸರ್ವೊಚ್ಛ ನ್ಯಾಯಾಧೀಶ ಭಗವಂತನಾಗಿದ್ದು ಅವನು ನನಗೆ ಸಹಾಯ ಮಾಡುತ್ತಾನೆ. ಇದು ನನ್ನ ಅನುಭವವಾಗಿದೆ ಎಂದು, ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಡಿ.ವ್ಯೆ ಬಸಾಪುರ ಅವರು ತಿಳಿಸಿದರು. ನ್ಯಾಯಾಂಗದಲ್ಲಿ ಅನೇಕ ಲೋಪದೋಷಗಳು ಇರುವುದು ಸಹಜ, ಆದರೆ ನ್ಯಾಯವು ಎಲ್ಲರಿಗೂ ಸಮಾನವಾಗಿದೆ. ನ್ಯಾಯದ ದುರುಪಯೋಗ ಪಡೆಯುವುದು ಸರಿಯಲ್ಲವೆಂದು ನುಡಿದರು.

ಪ್ರತಿಯೊಬ್ಬರ ಮನೆಯ ಪರಿಸ್ಥಿತಿ ಬದಲಾಗಬೇಕು, ಹೇಗೆ ಮಂದಿರಗಳಲ್ಲಿ ತೆಗೆದುಕೊಂಡು ಹೋಗುವ ಸಾಮಾನ್ಯ ತೆಂಗಿನಕಾಯಿ ಪರಿವರ್ತನೆಯಾಗಿ ಪ್ರಸಾದವಾಗುತ್ತದೆ, ಹಾಗೆಯೇ ಮನೆಯಲ್ಲಿ ಮಾಡುವ ಅಡುಗೆ, ಪ್ರಸಾದವಾಗಿ ನಾವು ಸ್ವೀಕರಿಸಬೇಕೆಂದು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್. ಟಿ. ಮಂಜುನಾಥರವರು ಹೇಳಿದರು.

’ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು, ಅನೇಕ ವರ್ಷಗಳಿಂದ ಅನೇಕ ಇಲಾಖೆಗಳಿಗೆ ಅಪರೋಕ್ಷವಾಗಿ ಸಹಾಯ ಮಾಡುತ್ತದೆ. ಕಾನೂನು ಪಾಲನೆಯಲ್ಲಿ, ಸ್ವಚ್ಚತೆಯ ಪಾಲನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ವಿಶ್ವದಲ್ಲಿ ಶಾಂತಿ, ನೆಮ್ಮದಿ, ಭಾವೈಕ್ಯತೆ, ಸಾಮರಸ್ಯ, ಸ್ನೇಹ, ಆತ್ಮಿಯ ಪ್ರೀತಿ ತರಲು ಪರಮಾತ್ಮನ ಆದೇಶ ಪಾಲಿಸುವ ಇಲ್ಲಿನ ಪ್ರತಿಯೊಬ್ಬ ಅನುಯಾಯಿಗಳ ಶ್ರಮದಾನ ಮಹಾನ್ ಆಗಿದೆ. ಧರ್ಮವೆಂದರೆ ಮಾನವನಿರ್ಮಿತ ಧರ್ಮವಲ್ಲದೇ, ಆತ್ಮಿಕ ಧರ್ಮವೆಂದು ದಾವಣಗೆರೆ ಬ್ರಹ್ಮಾಕುಮಾರೀಸ್‌ನ ಸಂಚಾಲಕಿ ಲೀಲಾ ಹೇಳಿದರು.

ನಾವು ಶ್ರೇಷ್ಠ ಗುಣಗಳ ಧಾರಣೆ ಮಾಡಿದರೆ ಆ ಧಾರಣೆ (ಧರ್ಮ) ನಮ್ಮನ್ನು ರಕ್ಷಣೆ ಮಾಡುವುದು. ಪರಮಾತ್ಮನು ಸ್ಥಾಪನೆ ಮಾಡುತ್ತಿರುವ ಹೊಸ ಜಗತ್ತಿನಲ್ಲಿ ಪ್ರಕೃತಿ, ಪುರುಷ ಎಲ್ಲವು ಶ್ರೇಷ್ಠವಾಗಿದ್ದು ನಿಯಮಬದ್ಧವಾಗಿರುತ್ತದೆ. ಅಲ್ಲಿ ದು:ಖ, ಅಶಾಂತಿ, ರೋಗ, ಭಯ, ಚಿಂತೆ, ದರೋಡೆ, ಸುಲಿಗೆ ಮುಂತಾದ ಕುಕೃತ್ಯಗಳು ಇರುವುದಿಲ್ಲವೆಂದು ಹೇಳಿದರು. ನೀವೆಲ್ಲರೂ ಆ ಸುಖಮಯ ಜಗತ್ತಿಗೆ ಬರಲು ಅವಕಾಶವಿದ್ದು, ಅದಕ್ಕೆ ಪರಮಾತ್ಮನು ಕಲಿಸುವ ರಾಜಯೋಗ ಮತ್ತು ಸಹಜ ಜ್ಞಾನ ತಿಳಿದುಕೊಳ್ಳಬೇಕೆಂದರು.
ಬೆಳಗಾವಿಯ ಲಾ ಕಾಲೇಜು ಉಪನ್ಯಾಸಕರಾದ, ಬ್ರಹ್ಮಾಕುಮಾರಿ ವಿದ್ಯಾ ಅವರು ಎಲ್ಲರಿಗೆ ರಾಜಯೋಗದ ಅನುಭೂತಿ ಮಾಡಿಸಿದರು. ಕಾರ್ಯಕ್ರಮದಲ್ಲಿ ರಾಜೀವ ಎಂ., ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರು, ನ್ಯಾಯವಾದಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಸರ್ವರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನು ಬ್ರಹ್ಮಾಕುಮಾರಿ ಗೀತಾರವರು ಸ್ವಾಗತಿಸಿದರು. ಕುಮಾರಿ ಧನ್ಯ ಸ್ವಾಗತ ನೃತ್ಯದಿಂದ ಸರ್ವರನ್ನು ರಂಜಿಸಿದರು. ಎಚ್.ಜೆ.ರಾಜು ಸರ್ವರನ್ನು ವಂದಿಸಿದರು.  ಕಾರ್ಯಕ್ರಮದ ನಿರೂಪಣೆಯನ್ನು ರೋಹಿಣಿ, ನಡೆಸಿದರು.

Related Articles

Back to top button