*ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ: ತಾಯಿ, ಓರ್ವ ಮಗುವಿನ ರಕ್ಷಣೆ; ಇಬ್ಬರು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಕೌಟಂಬಿಕ ಕಲಹಕ್ಕೆ ಬೇಸತ್ತು ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಘಟನೆ ನಡೆದಿದೆ.
ಶಿವಮೊಗ್ಗದ ಅರಕೆರೆಯ ದೇವಾಲಯ ಪಕ್ಕದ ರೈಲ್ವೆ ಸೇತುವೆ ಬಳಿ ತಾಯಿ ತನ್ನ ಮೂವರು ಮಕ್ಕಳೂಂದಿಗೆ ನದಿಗೆ ಹಾರಿದ್ದು, ಇದನ್ನು ಗಮನಿಸಿದ ನವೀನ್ ಹಾಗೂ ದಾದಪೀರ್ ಎಂಬ ಯುವಕರು ಪ್ರಾಣದ ಹಂಗು ತೊರೆದು ನದಿಗೆ ಹಾರಿದ್ದ ತಾಯಿ ಹಾಗೂ 11 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದಾರೆ. ಆದರೆ, 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನದಿಯಲ್ಲಿ ತೇಲಿ ಹೋಗಿದ್ದಾರೆ ಅವರನ್ನು ರಕ್ಶಿಸಲು ಸಾಧ್ಯವಾಗಿಲ್ಲ.
ಸ್ಥಳಕ್ಕೆ ಕೋಟೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಶೋಧ ನಡೆಸಲು ಮುಂದಾದರು. ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣದಿಂದ ಶೋಧ ಕಾರ್ಯ ನಡೆಸಲು ಆಗದೇ ವಾಪಸ್ ಅಗಿದ್ದಾರೆ.
ಕೌಟಂಬಿಕ ಕಲಹದ ಹಿನ್ನೆಲೆ ಚಿತ್ರದುರ್ಗ ಮೂಲದ ಭವಾನಿ ಎಂಬ ಮಹಿಳೆ ತನ್ನ ಮೂರು ಮಕ್ಕಳೊಂದಿಗೆ ನದಿಗೆ ಹಾರಿದ್ದು, ತಾಯಿ ಹಾಗೂ ಒಂದು ಮಗುವನ್ನು ರಕ್ಷಿಸಲಾಗಿದೆ. ರಕ್ಷಣೆಗೆ ಒಳಗಾದ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಹಾಲಿ ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ ನೆಲೆಸಿದ್ದರು ಎಂಬುವುದು ಪ್ರಾಥಮಿಕ ಮಾಹಿತಿಯಲ್ಲಿ ಗೊತ್ತಾಗಿದೆ. ಸ್ಥಳಕ್ಕೆ ಎಎಸ್ಪಿ ಕಾರ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




