*ಮೆಕ್ಕೆಜೋಳ ಖರೀದಿ ಹಾಗೂ ಎಥೆನಾಲ್ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯ ಹೈಲೈಟ್ಸ್*

ಪ್ರಗತಿವಾಹಿನಿ ಸುದ್ದಿ: ಮೆಕ್ಕೆಜೋಳ ಖರೀದಿ ಹಾಗೂ ಎಥೆನಾಲ್ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಭಾಂಗಣದಲ್ಲಿ ಸಭೆ ನಡೆಯಿತು.
ಸಭೆಯ ಮುಖ್ಯಾಂಶಗಳು:
• ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಥೆನಾಲ್ ಕೋಟಾಗೆ ಅನುಗುಣವಾಗಿ ಯಾವ ಡಿಸ್ಟಿಲರಿಗಳು ಎಷ್ಟು ಮೆಕ್ಕೆಜೋಳ ಖರೀದಿಸಬೇಕು ಎಂಬುವುದನ್ನು ಕೃಷಿ ಮಾರುಕಟ್ಟೆ ಇಲಾಖೆ ಈಗಾಗಲೇ ಸೂಚನೆಗಳನ್ನು ನೀಡಿದ್ದು, ಇದರ ಪ್ರಕಾರ ಡಿಸ್ಟಿಲರಿಗಳು ಮೆಕ್ಕೆ ಜೋಳ ಖರೀದಿಸಿ ರೈತರ ನೆರವಿಗೆ ಬರಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
• ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ಧಾನ್ಯ ಆಧಾರಿತ ಡಿಸ್ಟಿಲರಿಗಳು ನಾಫೆಡ್/ಎನ್ಸಿಸಿಎಫ್ ಮೂಲಕ ಮೆಕ್ಕೆಜೋಳ ಸಂಗ್ರಹಿಸಲು ಪ್ರಮಾಣಿತ ಕಾರ್ಯವಿಧಾನ (ಎಸ್ಒಪಿ) ಹೊರಡಿಸಿದೆ. ಇದರ ಪ್ರಕಾರ ಎಲ್ಲಾ ಡಿಸ್ಟಿಲರಿಗಳು ಕಾರ್ಯ ನಿರ್ವಹಿಸಬೇಕಾಗಿದೆ.
• ಎಥೆನಾಲ್ ಕೋಟಾ ನಿಗದಿ, ಮೆಕ್ಕೆಜೋಳ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಆದರೂ ಮೆಕ್ಕೆ ಜೋಳ ರೈತರ ಹಿತವನ್ನು ಕಾಪಾಡಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ.
• ಡಿಸ್ಟಿಲರಿಗಳು ನೇರವಾಗಿ ರೈತರಿಂದ ಕನಿಷ್ಠ ಬೆಂಬಲ ದರ ನೀಡಿ ಮೆಕ್ಕೆ ಜೋಳ ಖರೀದಿಸಲು ಮುಂದೆ ಬಂದರೆ, ಜಿಲ್ಲಾಡಳಿತದ ಮೂಲಕ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
• ಈಗಾಗಲೇ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ರಾಜ್ಯದ ಕಬ್ಬು ಬೆಳೆಗಾರರ, ಸಕ್ಕರೆ ಕಾರ್ಖಾನೆಗಳ ಹಾಗೂ ಡಿಸ್ಟಿಲರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದೇನೆ ಎಂದರು.
• ಮೆಕ್ಕೆಜೋಳದ ನಾಫೆಡ್ ಪೂರ್ವ ನಿರ್ಧಾರಿತ ಖರೀದಿ ಬೆಲೆ ಕ್ವಿಂಟಾಲ್ಗೆ ರೂ.2639 ಇದ್ದು, ಇದರಲ್ಲಿ ಪ್ರತಿ ಕ್ವಿಂಟಾಲ್ಗೆ ರೂ.2400 ಕನಿಷ್ಟ ಬೆಂಬಲ ಬೆಲೆ ಮೂಲಕ ರೈತರಿಗೆ ನೇರವಾಗಿ ಪಾವತಿಯಾಗಲಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ರೈತರಿಂದ ಮೆಕ್ಕೆಜೋಳ ಖರೀದಿಗೆ ಡಿಸ್ಟಿಲರಿಗಳಿಗೆ ಅವಕಾಶ ನೀಡಲಾಗಿದ್ದು, ಈ ಕುರಿತು ಡಿಸ್ಟಿಲರಿಗಳು ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
• ಎಥೆನಾಲ್ ಕನಿಷ್ಟ ಬೆಂಬಲ ಬೆಲೆ ಹೆಚ್ಚಳಕ್ಕೆ ನಿರಂತರವಾಗಿ ಕೇಂದ್ರಕ್ಕೆ ಮನವಿ ಮಾಡಿದ್ದರೂ, 2020ರಿಂದ ಹೆಚ್ಚಿಸಿಲ್ಲ. ಆದರೆ ಇದೇ ಅವಧಿಯಲ್ಲಿ ಮೆಕ್ಕೆ ಜೋಳದ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡುತ್ತಾ ಬರಲಾಗಿದೆ. ಇದರಿಂದ ಡಿಸ್ಟಿಲರಿಗಳಿಗೆ ನಷ್ಟ ಉಂಟಾಗುತ್ತಿದೆ ಎಂದು ಡಿಸ್ಟಿಲರಿ ಪ್ರತಿನಿಧಿಗಳು ತಿಳಿಸಿದರು.
• ರಾಜ್ಯದಲ್ಲಿ ಧಾನ್ಯ ಮಾತ್ರ ಆಧಾರಿತ ಮೂರು ಡಿಸ್ಟಿಲರಿಗಳಿಗೆ ಒಟ್ಟು 94400 ಕಿ.ಲೀ ಎಥೆನಾಲ್ ಹಂಚಿಕೆ ಮಾಡಲಾಗಿದ್ದು, 2,48,461 ಮೆ.ಟನ್ ಮೆಕ್ಕೆಜೋಳದ ಅವಶ್ಯಕತೆ ಇದೆ. 7 ಡ್ಯುಯಲ್ ಫೀಡ್ಸ್ಟಾಕ್ ಡಿಸ್ಟಿಲರಿಗಳಿಗೆ 1,90,751 ಕಿ.ಲೀ ಎಥೆನಾಲ್ ಹಂಚಿಕೆ ಮಾಡಲಾಗಿದ್ದು, 5,02,056 ಮೆ.ಟನ್ ಮೆಕ್ಕೆಜೋಳದ ಅವಶ್ಯಕತೆಯಿದೆ.


