
ಪ್ರಗತಿವಾಹಿನಿ ಸುದ್ದಿ: ಕ್ರೀಡೆ ಯಾರ ಸ್ವತ್ತಲ್ಲ. ಅವರವರ ಆಸಕ್ತಿಯಂತೆ ವಿವಿಧ ಕ್ರೀಡೆಯಲ್ಲಿ ಮಾರ್ಗದರ್ಶನ ಸಿಕ್ಕಲ್ಲಿ ರಾಷ್ಟ್ರದ ಪ್ರತಿಭೆ ಆಗಲಿದ್ದಾರೆ. ಆ ನಿಟ್ಟಿನಲ್ಲಿ ಡಾ. ಎಲ್.ಎಚ್.ಪೈ ಅವರ ಸ್ಮರಣೆಯಲ್ಲಿ ಕ್ರೀಡಾಕೂಟ ನಡೆಸುವದು ಉಳಿದವರಿಗೂ ಮಾದರಿ ಎಂದು ಶಾಸಕ ಭೀಮಣ್ಣ ನಾಯ್ಕ ಬಣ್ಣಿಸಿದರು.
ಐದು ದಿನಗಳ ಕಾಲ ನಗರದಲ್ಲಿ ಹಮ್ಮಿಕೊಂಡಿರುವ ಡಾ.ಎಲ್.ಎಚ್.ಪೈ ಮೆಮೋರಿಯಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೂ ಕ್ರೀಡೆಯ ಆಸಕ್ತಿ ಬೆಳೆಸಿ, ರಾಜ್ಯ, ರಾಷ್ಟ್ರ ಮಟ್ಟದ ಪ್ರತಿಭೆಗಳನ್ನಾಗಿ ಬೆಳೆಸಬೇಕು ಎಂಬುದು ಪೈ ಡಾಕ್ಟರ್ ಅವರ ಕನಸೂ ಆಗಿತ್ತು. ಅವರ ನೆನಪಿನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಕ್ರೀಡಾಂಗಣ ಮಾಡಲಾಗುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸಂಯೋಜಕ ಡಾ. ಕೈಲಾಶ ಪೈ ಮಾತನಾಡಿ, ಈಗ ಎಂಟು ಬಗೆಯ ಸ್ಪರ್ಧೆ ನಡೆಯಲಿದೆ. ಅಂತರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಶಿರಸಿಯ ಹಂತದಲ್ಲಿ ಎಂಟು ವಿವಿಧ ಸ್ಪರ್ಧೆ ನಡೆಯಲಿದೆ. ಇನ್ನೊಂದು ಮುಕ್ತ ಕ್ರೀಡಾಕೂಟ ಜೂನ್ 14-15ರಂದು ಕೂಡ ನಡೆಯಲಿದೆ ಎಂದರು.

ಲೆಕ್ಕ ಪರಿಷೋಧಕ ಉದಯ ಸ್ವಾದಿ, ಗೆಲುವು ಸೋಲು ಮುಖ್ಯವಲ್ಲ. ನಿರ್ಣಾಯಕರು ಕೊಟ್ಟ ನಿರ್ಣಯ ಪಾಲಿಸಿದರೆ ಆಟಗಾರರು ರಾಷ್ಟ್ರದ ಅತ್ಯುತ್ತಮ ಪ್ರಜೆ ಆಗಲಿದ್ದಾರೆ ಎಂದರು.
ಪೈ ಅವರ ಟ್ರಸ್ಟ್ ಅಧ್ಯಕ್ಷ ಅನಿಲ ಭಟ್ಟ, ನಾವು ಹಾಗೂ ಡಾ. ಎಲ್.ಎಚ್.ಪೈ ಅವರು ಆಡುತ್ತಿದ್ದಾಗ ಇಲ್ಲೇ ಪ್ರಾಣ ಬಿಟ್ಟರು. ಈ ಕಾರಣದಿಂದ ಈ ಕೋರ್ಟಿನ ಬಗ್ಗೆ ಭಾವನಾತ್ಮಕ ಸಂಬಂಧ ಇದೆ ಎಂದರು.
ಡಾ. ಎಲ್.ಎಚ್.ಪೈ ಅವರ ಪತ್ನಿ ಕರುಣಾ ಪೈ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ಎಸ್.ಕೆ.ಭಾಗವತ್, ಕೆ.ಎನ್.ಹೊಸ್ಮನಿ, ದಿಲೀಪ ನಾಯಕ, ವಿಶ್ವಾಸ ತೇಲಂಗ, ನಿರಂಜನ ಹೆಗಡೆ, ಪ್ರಶಾಂತ ಗಾಂವಕರ, ಡಾ.ಪದ್ಮಿನಿ, ಡಾ. ರಮೇಶ ಹೆಗಡೆ, ಡಾ. ರಾಜೇಶ ಶೇಟ್, ಡಾ. ಪೂಜಾ ಶೇಟ್ ಇದ್ದರು.
ಕಿರಿಯರ ವಿಭಾಗದಲ್ಲಿ 14 ಹಾಗೂ 18 ವಯೋಮಾನದೊಳಗಿನ ಗಂಡು ಹಾಗೂ ಹೆಣ್ಣುಮಕ್ಕಳಿಗೆ, ಪುರುಷ ಹಾಗೂ ಮಹಿಳಾ ಆಟಗಾರರಿಗೆ, 35 ವರ್ಷ ಮೇಲಿನ ಹಾಗೂ 16 ಹಾಗೂ 45 ವರ್ಷದ ಜೋಡಿಯಲ್ಲಿ ಜಂಬಲ್ ಡಬಲ್ಸ್ ನಡೆಯಲಿದೆ. ಮುಕ್ತ ಕ್ರೀಡಾಕೂಟದಲ್ಲಿ ಪುರುಷರ ಡಬಲ್ಸ ಹಾಗೂ 45 ವರ್ಷದ ಮೇಲಿನ ಆಟಗಾರರ ಡಬಲ್ಸ ನಡೆಯಲಿದೆ.