Kannada NewsKarnataka NewsLatest

ಬೆಳಗಾವಿ ನಗರ ಬಸ್ ನಿಲ್ದಾಣ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ; ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ನಗರ ಬಸ್ ನಿಲ್ದಾಣ (ಸಿಬಿಟಿ) ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಅವರು ನಗರದಲ್ಲಿ ಸೋಮವಾರ ಸ್ಮಾರ್ಟ್ ಸಿಟಿ ಯೋಜನೆಯಡಿ‌ ಕೈಗೊಂಡಿರುವ ನಾನಾ ಕಾಮಗಾರಿಗಳ ಪರಿಶೀಲನೆ  ನಡೆಸಿದರು.

ನಗರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ  ತಡೆಯಾಜ್ಞೆ ನೀಡಿದ್ದರಿಂದ  ನಿಲ್ದಾಣ ನಿರ್ಮಾಣ ಕಾಮಗಾರಿ  8 ತಿಂಗಳು ವಿಳಂಬವಾಗಿತ್ತು. ಇದೀಗ ತಡೆಯಾಜ್ಞೆ ತೆರವುಗೊಂಡು ಕಾಮಗಾರಿ ಪುನಾರಂಭಗೊಂಡಿದೆ. ಕಾಮಗಾರಿಯ ವೇಗ ಇನ್ನಷ್ಟು ಹೆಚ್ಚಿಸಿ ಬರುವ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಈಗಾಗಲೇ ನಿಲ್ದಾಣ ಕಟ್ಟಡದ 2 ಅಂತಸ್ತುಗಳ ನಿರ್ಮಾಣ ಮಾಡಿದ್ದು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ  ಭರವಸೆ ನೀಡಿದರು.

Home add -Advt

ಇದೇ ವೇಳೆ ಟಿಳಕವಾಡಿಯಲ್ಲಿ 46 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಲಾಮಂದಿರ ಕಾಮಗಾರಿಯನ್ನು  ಜಿಲ್ಲಾಧಿಕಾರಿ ನಿತೇಶ ಪಾಟೀಲ ಪರಿಶೀಲಿಸಿ ೀ ಕಾಮಗಾರಿಯನ್ನೂ ಡಿಸೆಂಬರ್ ಒಳಗೆ ಮುಗಿಸಬೇಕು ಎಂದು ಸೂಚಿಸಿದರು.

ಕಲಾಮಂದಿರದ ಒಂದು ಬದಿಯ‌ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಆದ್ದರಿಂದ ಆದಷ್ಟು ಬೇಗನೇ ತಡೆಯಾಜ್ಞೆ ತೆರವುಗೊಳಿಸುವ ಮೂಲಕ ಅಲ್ಲಿಯೂ   ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳಿಗೆ  ಸೂಚಿಸಿದರು.

ನಗರದ ಹರ್ಷ ಶೋರೂಂ ಎದುರಿನಿಂದ ಜಿಎಸ್ ಟಿ ಕಚೇರಿಯವರೆಗಿನ ರಸ್ತೆ ವೈಟ್ ಟಾಪಿಂಗ್ ಹಾಗೂ ಪೇವರ್ಸ್ ಅಳವಡಿಕೆ ಕಾಮಗಾರಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ   ಅವರು ಮಳೆಗಾಲ ಇರುವುದರಿಂದ ಅಕ್ಟೋಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ಚಂದ್ರಶೇಖರ್ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಸಾಮಾನ್ಯವಾದುದನ್ನು ಸಾಧಿಸಿದವರಿಂದ ಮಾತ್ರ ಇತಿಹಾಸ ನಿರ್ಮಾಣ ಸಾಧ್ಯ: ಉಪನ್ಯಾಸಕ, ಚಿಂತಕ ವೀರೇಶ ಪಾಟೀಲ

Related Articles

Back to top button