*ಡೀಲ್ ಮಾಡಿಕೊಂಡು ಉಪವಾಸ ಸತ್ಯಾಗ್ರಹ ಅಂತ್ಯ ಎಂದು ಟೀಕಿಸಿದವರಿಗೆ ಖಡಕ್ ಉತ್ತರ ನೀಡಿದ ಸೋನಮ್ ವಾಂಗ್ಚುಕ್*

ಪ್ರಗತಿವಾಹಿನಿ ಸುದ್ದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆಸುತ್ತಿದ್ದ 26 ದಿನಗಳ ನಿರಂತರ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ ಬೆನ್ನಲ್ಲೇ, ಲಡಾಖ್ನ ಪ್ರಖ್ಯಾತ ಪರಿಸರ ಮತ್ತು ಶಿಕ್ಷಣ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಹಲವರು ಟೀಕಿಸಿದ್ದಾರೆ. ಡೀಲ್ ಮಾಡಿಕೊಂಡು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಈ ಟೀಕೆ, ಆರೋಪಗಳಿಗೆ ವಿಡಿಯೋ ಹೇಳಿಕೆ ಮೂಲಕ ಸೋನಮ್ ಖಡಕ್ ಉತ್ತರ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮನವೋಲಿಕೆ ಬಳಿಕ ಸೋನಮ್ ವಾಂಗ್ಚುಕ್ ಸತ್ಯಾಗ್ರಹವನ್ನು ಕೊನೆಗೊಳಿಸಿದಕ್ಕೆ ಇದೀಗ ಭಾರೀ ಟೀಕೆಗಳು ಬರುತ್ತಿದೆ. ಇದಕ್ಕೆ ವಾಂಗ್ಚುಕ್ ಅವರು ಉತ್ತರ ನೀಡಿದ್ದಾರೆ.
ದೆಹಲಿಯ ಜಂತರ್ ಮಂತರ್ನಿಂದ ಆಸ್ಪತ್ರೆಯ ಐಸಿಯು ವಾರ್ಡ್ಗೆ ದಾಖಲಾಗಿದ್ದ ನಾನು 26 ದಿನಗಳ ಸುದೀರ್ಘ ಹಸಿವಿನ ನಂತರವೂ ನಾನು ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬೇಕೇ? ಎಂದು ಪ್ರಶ್ನಿಸಿದ್ದಾರೆ.
ಆಸ್ಪತ್ರೆಯ ಹಾಸಿಗೆಯಿಂದಲೇ ರೆಕಾರ್ಡ್ ಮಾಡಿದ 22 ನಿಮಿಷಗಳ ವೀಡಿಯೊದಲ್ಲಿ ಮಾತನಾಡಿದ ಅವರು “ಸ್ವಲ್ಪ ಬೇಸರ, ಆಶ್ಚರ್ಯ ಹಾಗೂ ಕೋಪದಿಂದ ಈ ವೀಡಿಯೊ ಮಾಡುತ್ತಿದ್ದೇನೆ. 26 ದಿನಗಳ ಹಸಿವಿನಿಂದಾಗಿ ನನ್ನ ದೇಹದ ಸ್ನಾಯುಗಳು ಕ್ಷೀಣಿಸಿವೆ, ಸುಮಾರು 11 ಕೆಜಿ ತೂಕ ಕಡಿಮೆಯಾಗಿದೆ ಮತ್ತು ಅಂಗಾಂಗಗಳಿಗೆ ತೀವ್ರ ಹಾನಿಯಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಜೇಪಿ ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಉಪಸ್ಥಿತಿಯಲ್ಲಿ ಉಪವಾಸ ಮುರಿದಿದ್ದಕ್ಕೆ ಎದ್ದಿರುವ ಟೀಕೆಗಳಿಗೆ ಉತ್ತರಿಸಿದ ಅವರು, “ಸರ್ಕಾರದೊಂದಿಗೆ ಡೀಲ್ ಮಾಡಿಕೊಳ್ಳಲು ಯಾರಾದರೂ 26 ದಿನ ಹಸಿವಿನಿಂದ ಬಳಲುತ್ತಾರೆಯೇ? ಡೀಲ್ ಮಾಡಿಕೊಳ್ಳುವುದಿದ್ದರೆ ದೆಹಲಿಯ ಭಾರಿ ಬಿಸಿಲಿನಲ್ಲಿ ರಸ್ತೆಯಲ್ಲಿ ಕೂರುವ ಬದಲು ಏಸಿ ಕೊಠಡಿಯಲ್ಲಿ ಕುಳಿತು ಮಾಡಬಹುದಿತ್ತಲ್ಲವೇ?” ಎಂದು ತಿರುಗೇಟು ನೀಡಿದ್ದಾರೆ.
ಮತ್ತೊಂದೆಡೆ, ವಾಂಗ್ಚುಕ್ ಅವರು ಉಪವಾಸ ಹಿಂಪಡೆದಿರುವುದನ್ನು ಸಿಜೆಪಿ (CJP) ವಕ್ತಾರ ಅಶುತೋಷ್ ರಂಕಾ ಸ್ವಾಗತಿಸಿದ್ದಾರೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದ ಕಾರಣ ನಾವೇ ಉಪವಾಸ ಹಿಂಪಡೆಯಲು ವಿನಂತಿಸುತ್ತಿದ್ದೆವು. ಅವರು ಉಪವಾಸ ಅಂತ್ಯಗೊಳಿಸಿರುವುದು ಸಂತಸ ತಂದಿದೆ, ಆದರೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ.



