
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ –
ನೈರುತ್ಯ ರೈಲ್ವೆಯ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ 22ನೇ ಸಭೆಯನ್ನು ಇಂದು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು. ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ರವರು ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಎಲ್ಲ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ರವರು ನೈರುತ್ಯ ರೈಲ್ವೆಯು ಹಲವಾರು ವಿಭಾಗಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ ಎಂದು ಹೇಳಿದರು. ಮೈಸೂರು ಮತ್ತು ಎಮ್.ಜಿ.ಆರ್. ಚೆನ್ನೈ ನಡುವೆ ದಕ್ಷಿಣ ಭಾರತದ ಮೊಟ್ಟಮೊದಲ ವಂದೇಭಾರತ್ ಎಕ್ಸ್ ಪ್ರೆಸ್ ರೈಲಿಗೆ ಸನ್ಮಾನ್ಯ ಪ್ರಧಾನಮಂತ್ರಿಯವರು ಚಾಲನೆ ನೀಡಿದ್ದು, ಬೆಳಗಾವಿ, ಹೊಸಪೇಟೆ, ದಾವಣಗೆರೆ ನಿಲ್ದಾಣಗಳ ಪುನರಭಿವೃದ್ಧಿ, ಇವೇ ಮೊದಲಾದ ಸಾಧನೆಗಳ ಬಗ್ಗೆ ಅವರು ತಿಳಿಸಿದರು. ಬೆಂಗಳೂರು ದಂಡು ಮತ್ತು ಯಶವಂತಪುರ ರೈಲು ನಿಲ್ದಾಣಗಳ ಅಭಿವೃದ್ಧಿ ಕಾರ್ಯವನ್ನು ಸಹಾ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ನೈರುತ್ಯ ರೈಲ್ವೆಯ ರೈಲುಗಳ ಸಮಯಪಾಲನೆಯು 94.10% ಆಗಿದ್ದು ಸಮಯಪಾಲನೆಯಲ್ಲಿ ನೈರುತ್ಯ ರೈಲ್ವೆಯು ಭಾರತೀಯ ರೈಲ್ವೆಯಲ್ಲಿಯೇ 4ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದರು.
ಜನರ ಅನುಕೂಲಕ್ಕಾಗಿ ಹಬ್ಬಗಳು ಮತ್ತು ರಜಾದಿನಗಳಲ್ಲಿ ನೈರುತ್ಯ ರೈಲ್ವೆಯು 83 ವಿಶೇಷ ರೈಲುಗಳನ್ನು ಓಡಿಸಿದೆ ಮತ್ತು ರೈಲುಗಳಿಗೆ 1798 ಹೆಚ್ಚುವರಿ ಕೋಚ್ ಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ವಿವರಿಸಿದ ಅವರು ಹೊಸಮಾರ್ಗ, ಜೋಡಿಮಾರ್ಗ ಮತ್ತು ವಿದ್ಯುದೀಕರಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತಿದೆ. ಈಗಾಗಲೇ ನೈರುತ್ಯ ರೈಲ್ವೆ ಜಾಲದ 52% ವಿದ್ಯುದೀಕರಣಗೊಂಡಿದೆ ಎಂದು ತಿಳಿಸಿದರು.
ಹೆಚ್ಚುವರಿ ನಿಲುಗಡೆ, ರೈಲುಸಂಚಾರದ ಆವೃತ್ತಿಯಲ್ಲಿ ಹೆಚ್ಚಳ, ರಸ್ತೆ ಮೇಲ್ಸೇತುವೆ/ರಸ್ತೆ ಕೆಳಸೇತುವೆಗಳ ನಿರ್ಮಾಣ ಇವೇ ಮೊದಲಾದ ಪ್ರಯಾಣಿಕ ಸೌಲಭ್ಯಗಳು, ರೈಲುಸೇವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಅವರು ವಿವರಿಸಿದರು. ಸದಸ್ಯರು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಆರಂಭಿಸಿದ್ದಕ್ಕಾಗಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿದರು.
ಶಿವಕುಮಾರ ಉದಾಸಿ, ಲೋಕಸಭಾ ಸದಸ್ಯರು, ಹಾವೇರಿ; ಪಿ.ಸಿ. ಗದ್ದೀಗೌಡರ್, ಲೋಕಸಭಾ ಸದಸ್ಯರು, ಬಾಗಲಕೋಟೆ; ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯರು; ನೀಲೇಶ್ ಕಾಬ್ರಾಲ್, ಲೋಕೋಪಯೋಗಿ, ಶಾಸಕಾಂಗ ವ್ಯವಹಾರಗಳು, ಪರಿಸರ, ಕಾನೂನು ಮತ್ತು ನ್ಯಾಯಾಂಗ ಸಚಿವರು, ಗೋವಾ ಸರ್ಕಾರ ಮತ್ತು ವಾಣಿಜ್ಯೋದ್ಯಮ ಸಂಸ್ಥೆ, ಪ್ರಯಾಣಿಕ ಸಂಘಗಳು, ಗ್ರಾಹಕ ರಕ್ಷಣಾ ಸಂಘಟನೆ, ದಿವ್ಯಾಂಗಜನರ ಸಂಘಟನೆಗಳು ಮತ್ತು ರೈಲ್ವೆ ಮಂಡಳಿಯ ವಿಶೇಷ ಪ್ರತಿನಿಧಿತ್ವದ 30 ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯರು:

ನೈರುತ್ಯ ರೈಲ್ವೆಯ ಅಪರ ಪ್ರಧಾನ ವ್ಯವಸ್ಥಾಪಕರಾದ ಪಿ.ಕೆ. ಮಿಶ್ರಾ, ಇಲಾಖೆಗಳ ಪ್ರಧಾನ ಮುಖ್ಯಸ್ಥರು, ನೈರುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
For English News –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ