ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮಹಿಳೆಯರು ಶರಣ ಸಂಸ್ಕೃತಿ ಆಧಾರದ ಮೇಲೆ ಬದುಕು ಅನಾವರಣಗೊಳಿಸಿ ಸ್ತ್ರೀ ಅಸ್ಮಿತೆಯನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.
ಅವರು ಶನಿವಾರ ಸಂಜೆ ನಗರದ ಮಹಾಂತೇಶ ನಗರದ ಮಹಾಂತೇಶ ಭವನದಲ್ಲಿ ಲಿಂಗಾಯತ ಮಹಿಳಾ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಬದುಕು- ಅನಾವರಣ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಆದರೂ ಇನ್ನೂ ಅನೇಕ ಕಡೆ ಮಹಿಳೆ ಮುಜುಗರ ಬಿಟ್ಟು ಸಾಧನೆ ಮಾಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿತಾ ದೇಸಾಯಿ ವಹಿಸಿದ್ದರು.
ಈ ವೇಳೆ ಬಸವೇಶ್ವರ ಕೋ-ಆಫ್ ಬ್ಯಾಂಕ್ ಬೆಳಗಾವಿ ಇದರ ಮಹಿಳಾ ನಿರ್ದೇಶಕಿಯಾಗಿ ನೇಮಕಗೊಂಡ ದೀಪಾ ಕುಡಚಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ನಿಮಿತ್ಯ ಮಹಿಳೆಯರು ಭಾರತದ ವಿವಿಧ ಪ್ರಾಂತ್ಯಗಳ ವೇಶಭೂಷಣ ಧರಿಸಿ, ವಿವಿಧ ಮನೋರಂಜನೆ ಕಾರ್ಯಕ್ರಮ ನಡೆಸಿದರು.
ಶೈಲಜಾ ಬಿಂಗೆ ಗೌರವ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರತಿಭಾ ಕಳ್ಳಿಮಠ ನಿರೂಪಿಸಿದರು. ಲಲಿತಾ ಪಾಟೀಲ ವಂದಿಸಿದರು.