Latest

ಸಚಿವದ್ವಯರ ಸಂಧಾನ ಯಶಸ್ವಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಸಚಿವ ಶ್ರೀರಾಮುಲು ಹಾಗೂ ಸುಧಾಕರ್ ನಡುವೆ ಸಂಧಾನ ಮಾಡುವಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಇಂದು ಸಿಎಂ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಸಚಿವ ಶ್ರೀರಾಮುಲು ಹಾಗೂ ಸುಧಾಕರ್ ಇಬ್ಬರನ್ನು ಒಟ್ಟಿಗೆ ಕೂರಿಸಿ ಮಾತನಾಡಿದ್ದು, ಇಬ್ಬರ ನಡುವಿನ ಅಸಮಾಧಾನವನ್ನು ಶಮನ ಮಾಡಿದ್ದಾರೆ.

ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ಖಾತೆ ಬದಲಾವಣೆಯಿಂದ ಯಾವುದೇ ಅಸಮಾಧಾನವಿಲ್ಲ. ನನಗೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಹೆ ಖಾತೆಯನ್ನು ನಾನು ನಿರ್ವಹಿಸಲು ಒಪ್ಪಿದ್ದೇನೆ. ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಎರಡೂ ಒಂದೇ ಆಗಿರುವುದರಿಂದ ಕೊರೊನಾ ನಿರ್ವಹಣೆ ಸುಲಭ ಎಂಬ ಕಾರಣಕ್ಕೆ ಸುಧಾಕರ್ ಅವರಿಗೆ ಎರಡೂ ಖಾತೆ ನೀಡಲಾಗಿದೆ. ಈ ಬಗ್ಗೆ ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.

ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್, ನಾವು ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಯಾರು ಹೆಚ್ಚು, ಯಾರು ಕಮ್ಮಿ ಎಂಬುದಿಲ್ಲ. ರಾಮುಲು ಡಿ ಪ್ರಮೋಟ್ ಆಗಿಲ್ಲ, ಪ್ರಮೋಷನ್ ಆಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ದೊಡ್ಡ ಖಾತೆಯಾಗಿದೆ ಎಂದು ಹೇಳಿದರು.

ಇನ್ನು ಆರೋಗ್ಯ ಹಾಗೂ ವೈದ್ಯಕೀಯ ಎರಡೂ ಒಂದೇ. ಬೇರೆ ಬೇರೆ ರಾಜ್ಯಗಳಲ್ಲಿ ಈ ಖಾತೆಗಳನ್ನು ಒಬ್ಬರೇ ನಿರ್ವಹಿಸುತ್ತಾರೆ. ಆಡಳಿತಾತ್ಮಕವಾಗಿ ನಿರ್ವಹಣೆ ಸುಲಭ ಎಂಬ ಕಾರಣಕ್ಕೆ ಎರಡು ಖಾತೆಯನ್ನು ಒಬ್ಬರಿಗೆ ನೀಡಿದ್ದಾರೆ. ಇದರಲ್ಲಿ ಯಾರೂ ಅಸಮಾಧಾನಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button