Kannada NewsLatest

ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ: ಚುನಾವಣಾಧಿಕಾರಿ ಬಿಸ್ವಾಸ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅತೀ ಹೆಚ್ಚು ಮತಗಟ್ಟೆಗಳು‌ ಇರುವುದರಿಂದ ಮತ್ತು ಕೋವಿಡ್ ಮಾರ್ಗಸೂಚಿ ಪಾಲಿಸಲು ಅನುಕೂಲವಾಗುವಂತೆ ಮತದಾನ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ. ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿರುತ್ತದೆ ಎಂದು ವಾಯವ್ಯ ಶಿಕ್ಷಕರ/ಪದವೀಧರ ಹಾಗೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ತಿಳಿಸಿದರು.

ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಜ್ಯೋತಿ ಪಿಯು ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಆವರಣದಲ್ಲಿ ಇರುವ ಮಾಧ್ಯಮ ಕೇಂದ್ರದಲ್ಲಿ ಶನಿವಾರ(ಜೂ.10) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್, ಡಿಜಿಟಲ್ ಪೆನ್ ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ. ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಆಧಾರ್ ಕಾರ್ಡ್, ಚಾಲನಾ ಪರವಾನಿಗೆ ಪತ್ರ, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ಸೇರಿದಂತೆ ಇತರೆ ಹತ್ತು ದಾಖಲೆಗಳನ್ನು ತೋರಿಸಿ ಮತ ಚಲಾವಣೆಗೆ ಅವಕಾಶವಿರುತ್ತದೆ.

ಮಾದರಿ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿದ ಅವರು, ಮೂರು ಮತಕ್ಷೇತ್ರಗಳ ವ್ಯಾಪ್ತಿಯ ಎಲ್ಲ‌ ಜಿಲ್ಲೆಯಲ್ಲಿ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಅಕ್ರಮ ಮದ್ಯ, ಸೀರೆ, ಕ್ಯಾಪ್ ಇತ್ಯಾದಿ ಉಡುಗೊರೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಸ್ವಾಸ್ ತಿಳಿಸಿದರು.

ಶಿಕ್ಷಕರ ಹಾಗೂ ಪದವೀಧರರ ಮತಕ್ಷೇತ್ರಕ್ಕೆ ಒಂದೇ ಮತಗಟ್ಟೆಯಲ್ಲಿ ಪ್ರತ್ಯೇಕ‌ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರ ಮತಕ್ಷೇತ್ರದ ಮತಪೆಟ್ಟಿಗೆಗೆ ಪಿಂಕ್ ಹಾಗೂ ಪದವೀಧರ ಮತಕ್ಷೇತ್ರಕ್ಕೆ ಬಿಳಿ ಬಣ್ಣದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಅಥಣಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಕರ್ತವ್ಯ ಲೋಪವೆಸಗಿದ ತಹಶೀಲ್ದಾರ ಅವರನ್ನು ಚುನಾವಣಾ ಕಾರ್ಯದಿಂದ ಬಿಡುಗಡೆಗೊಳಿಸಿ ಬೇರೆಯವರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಪ್ರತಿ‌ಯೊಬ್ಬ ಮತದಾರರಿಗೆ ಅವರು ಮತ ಚಲಾಯಿಸಬೇಕಾದ ಮತಗಟ್ಟೆಯ ಮಾಹಿತಿಯನ್ನು ಹಾಗೂ ಗೂಗಲ್ ನಕ್ಷೆಯನ್ನು ಅವರ ಮೊಬೈಲ್ ಸಂಖ್ಯೆಗೆ ಕಳಿಸಲಾಗುತ್ತಿದೆ.
ಇದರಿಂದ ಮತಗಟ್ಟೆಯ‌ ನಿಖರ ಮಾಹಿತಿಯನ್ನು ಮತದಾರರಿಗೆ ತಲುಪಿಸಲಾಗುತ್ತಿದ್ದು, ಇದರಿಂದ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲೆಯು ಗಡಿಭಾಗದಲ್ಲಿರುವುದರಿಂದ ಜಿಲ್ಲೆಯ ಗಡಿಯಿಂದ ನೆರೆಯ ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಕೂಡ ಐದು ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಭದ್ರತಾ ವ್ಯವಸ್ಥೆಯ ಕುರಿತು ಮಾಹಿತಿಯನ್ನು ನೀಡಿದರು. ಮತಗಟ್ಟೆಗಳ ಸೂಕ್ಷ್ಮತೆಯನ್ನು ಆಧರಿಸಿ ಅಗತ್ಯ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.

ಮತದಾನದದ ಬಳಿಕ ಮತಪೆಟ್ಟಿಗೆಗಳನ್ನು ಸುರಕ್ಷಿತವಾಗಿ ತಂದು ಸ್ಟ್ರಾಂಗ್ ರೂಮ್ ನಲ್ಲಿ ಇರಿಸುವವರೆಗೆ ಭದ್ರತೆ‌ ಒದಗಿಸಲಾಗುತ್ತದೆ. ಮತ ಎಣಿಕೆ ಸಂದರ್ಭದಲ್ಲಿ ಕೂಡ ಮತ ಎಣಿಕೆ‌ ಕೇಂದ್ರದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಭದ್ರತೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ನಜ್ಮಾ ಪೀರಜಾದೆ, ಗೀತಾ ಕೌಲಗಿ ಮತ್ತಿತರರು ಉಪಸ್ಥಿತರಿದ್ದರು.

ಬಸವರಾಜ್ ಹೊರಟ್ಟಿಗೆ ನೋಟಿಸ್ ಜಾರಿಗೊಳಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ್ ಬಿಸ್ವಾಸ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button