
ಗಡಿವಿವಾದ: ಮುಖ್ಯಮಂತ್ರಿಗಳು ಸುವರ್ಣ ಸೌಧದಲ್ಲೇ ಉನ್ನತ ಮಟ್ಟದ ಸಭೆ ಕರೆಯಲಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗಡಿವಿವಾದ ಮತ್ತು ಮಹಾದಾಯಿ ವಿವಾದ ಸಂಬಂಧ ಇಂದು ಶುಕ್ರವಾರ ಜನೇವರಿ 10 ರಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಮಠಾಧೀಶರ ಸಾನಿಧ್ಯದಲ್ಲಿ ಚಿಂತನ ಸಭೆ ನಡೆಯಿತು.
ಗದಗದ ತೋಂಟದಾರ್ಯ ಮಠದ ಜಗದ್ಗುರುಗಳಾದ ಡಾ.ಸಿದ್ದರಾಮ ಮಹಾಸ್ವಾಮಿಗಳು ಹಾಗೂ ಮುಂಬಯಿ ಕರ್ನಾಟಕದ ಏಳು ಜಿಲ್ಲೆಗಳ ಇಪ್ಪತ್ತಕ್ಕೂ ಅಧಿಕ ಮಠಾಧೀಶರ ಸಾನಿಧ್ಯದಲ್ಲಿ ನಡೆದ ಈ ಸಭೆಯು ಮಹಾದಾಯಿ ವಿವಾದ ಇತ್ಯರ್ಥವಾಗದೇ ಇರುವದಕ್ಕೆ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳನ್ನೇ ಹೊಣೆಗಾರರನ್ನಾಗಿ ಮಾಡಿತು.

ಮಹಾದಾಯಿ ನ್ಯಾಯಮಂಡಳಿಯು ತನ್ನ ತೀರ್ಪು ನೀಡಿ 17 ತಿಂಗಳಾದವು. ಇನ್ನೂ ಕೇಂದ್ರವು ಅಧಿಸೂಚನೆ ಪ್ರಕಟಿಸಿಲ್ಲ. ಸದ್ಯ ಮೇಲ್ಮನವಿಗಳು ಸುಪ್ರೀಮ್ ಕೋರ್ಟ ಮುಂದಿವೆ. ನ್ಯಾಯಾಲಯದಲ್ಲಿ ಇತ್ಯರ್ಥ ಆಗಲು ವಿಳಂಬವಾಗಬಹುದು. ಪ್ರಧಾನಿ ಅವರು ಕರ್ನಾಟಕ ಮತ್ತು ಗೋವೆ ಮುಖ್ಯಮಂತ್ರಿಗಳನ್ನು ಮಾತುಕತೆಗೆ ಆಹ್ವಾನಿಸಿ ವಿವಾದವನ್ನು ಬಗೆಹರಿಸಬೇಕು.ಪ್ರಧಾನಿ ಮೇಲೆ ಒತ್ತಡ ತರಲು ರಾಜ್ಯದ 28 ಸಂಸದರು ಹಾಗೂ ಮುಂಬಯಿ ಕರ್ನಾಟಕದ ಕೇಂದ್ರ ಸಚಿವರು ಅಗತ್ಯ ಬಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಲೂ ಸಹ ಸಿದ್ಧರಾಗಬೇಕು ಎಂದು ಸಭೆಯು ಆಗ್ರಹಿಸಿತು.


ನಾಗನೂರು ಮಠದ ಕಿರಿಯ ಸ್ವಾಮೀಜಿ ಡಾ.ಅಲ್ಲಮಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿನ ಸಭೆಯ ನಿರ್ಣಯಗಳನ್ನು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ , ಕೇಂದ್ರ ಮಂತ್ರಿಗಳಾದ ಸುರೇಶ ಅಂಗಡಿ ಮತ್ತು ಪ್ರಲ್ಹಾದ ಜೋಶಿ ಅವರಿಗೆ ಕಳಿಸಿಕೊಡಲು ತೀರ್ಮಾನಿಸಲಾಗಿದೆ.

ಯಾವುದೇ ರಾಜಕಾರಣಿಗಳನ್ನು ಸಭೆಗೆ ಆಹ್ವಾನಿಸಿರಲಿಲ್ಲ.