
ಪ್ರಗತಿವಾಹಿನಿ ಸುದ್ದಿ; ಮೈಸೂರು: ಮಕ್ಕಳ ಹಠ ಎದೆಂತಹ ದುರಂತಕ್ಕೆ ಎಡೆಮಾಡಿಕೊಡುತ್ತೆ ಎಂಬುದಕ್ಕೆ ಈ ಘಟನೆ ಉದಾಹರಣೆ. ಅಪ್ಪ-ಅಮ್ಮ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡು ಕ್ರಿಮಿನಾಶಕ ಸೇವಿಸಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಇಲ್ಲಿನ ಎಚ್.ಡಿ.ಕೋಟೆ ತಾಲೂಕಿನ ಬೆಳಗನಹಳ್ಳಿ ಕಾವಲ್ ಗ್ರಾಮದಲ್ಲಿ ಹೆಚ್ಚಿನ ರೇಟಿನ ಮೊಬೈಲ್ ಕೊಡಿಸಿಲ್ಲ ಎಂದು 15 ವರ್ಷದ ಬಾಲಕ ಆದಿತ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಕ್ಕನಿಗೆ ತನಗಿಂತ ಹೆಚ್ಚಿನ ಬೆಲೆ ಮೊಬೈಲ್ ಕೊಡಿಸಿದಕ್ಕೆ ಆದಿತ್ಯ ಕೋಪಗೊಂಡಿದ್ದ. ತನಗೂ ಹೊಸ ಮೊಬೈಲ್ ಕೊಡಿಸಬೇಕೆಂದು ಹಠ ಹಿಡಿದಿದ್ದ. ಪೋಷಕರು ಮೊಬೈಲ್ ಕೊಡಿಸಲು ಹಿಂದೇಟು ಹಾಕಿದ್ದರಿಂದ ಕ್ರಿಮಿನಾಶಕ ಸೇವಿಸಿದ್ದಾನೆ.
ಕ್ರಿಮಿನಾಶಕ ಸೇವಿಸಿದ್ದ ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆದಿತ್ಯ ಸಾವನ್ನಪ್ಪಿದ್ದಾನೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿದೆ. ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.