Kannada News

ಮನಸ್ಸುಗಳು ಒಂದಾದರೆ ಎಲ್ಲಾ ಮನೆಗಳು ಮಂತ್ರಾಲಯ 

ಮನಸ್ಸುಗಳು ಒಂದಾದರೆ ಎಲ್ಲಾ ಮನೆಗಳು ಮಂತ್ರಾಲಯ 

ಮಂತ್ರಾಲಯ/ಆಂಧ್ರಪ್ರದೇಶ :   ಇವತ್ತು ಎಲ್ಲಾ ರಂಗದಲ್ಲಿರುವ ಮನಸ್ಸುಗಳು ಒಂದಾಗುವ ಅವಶ್ಯಕತೆ ಇದೆ. ಎಲ್ಲಾ ದೇಶದ ಕಾವಿ ಪರಂಪರೆಯ ಸ್ವಾಮಿಗಳು ಒಂದಾದರೆ ಅದೇ ನಿಜವಾದ ಮಂತ್ರಾಲಯ. ಮನೆಯಲ್ಲಿ ಅಣ್ಣ, ತಮ್ಮ, ಅಕ್ಕ, ತಂಗಿ ಇಡೀ ಕುಟುಂಬ ಒಂದಾದರೆ ಅದೇ ಮಂತ್ರಾಲಯ ಎಂದು  ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಮಂತ್ರಾಲಯದಲ್ಲಿ ಜರುಗಿದ ಅಖಿಲ ಭಾರತ ಚುಟುಕು ಸಾಹಿತ್ಯ ದ್ವಿತೀಯ ಸಮ್ಮೇಳನದ ಉದ್ಘಾಟಕರಾಗಿ ಶ್ರೀಗಳು ಮಾತನಾಡಿದರು.  ರಾಜಕಾರಣಿಗಳು ಭೇದ-ಭಾವ ತೊರೆದು ದೇಶಿಯ ವ್ಯವಸ್ಥೆಗೆ ಸ್ಪಂದಿಸಿದರೆ ಅದೇ ಮಂತ್ರಾಲಯ. ಮಂತ್ರಾಲಯವೆಂದರೆ ಮನಸ್ಸುಗಳ ಜೋಡಣೆ.  ಹೃದಯದ ವಿಶಾಲತೆ. ಗುರು ರಾಘವೇಂದ್ರರು ಎಲ್ಲರನ್ನೂ ಪ್ರೀತಿಸಿದರು. ಹಸಿದವರಿಗೆ ಅನ್ನ ನೀಡಿದರು. ನೊಂದವರ ಬಾಳಿಗೆ ಬಂಧುವಾಗಿ ನಿಂತರು. ಅದಕ್ಕಾಗಿ ರಾಘವೇಂದ್ರರ ಭಕ್ತರು ಎಲ್ಲಾ ಸಮುದಾಯದವರಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಎಲ್ಲರೂ ಒಂದಾಗಿ ಸಮಾಜ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಅವಶ್ಯಕತೆಯಿದೆ. ಈ ಕಾರ್ಯವನ್ನು ಶ್ರೀಮಠದ ಅಧಿಪತಿಗಳು ಮಾಡುತ್ತಿದ್ದಾರೆ ಎಂದರು.
 ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಶ್ರೀ ಮಠದ ಪೀಠಾಧ್ಯಕ್ಷರಾದ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಮಾತನಾಡಿ, ಕನ್ನಡ ಸಾಹಿತ್ಯಕ್ಕೂ ಮಂತ್ರಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಮಂತ್ರಾಲಯದ ರಾಘವೇಂದ್ರ ಭಕ್ತರು ಕರುನಾಡಿನಲ್ಲಿ ಲಕ್ಷಾಂತರ ಜನ  ಇದ್ದಾರೆ. ಅನೇಕ ಸಾಹಿತಿಗಳಿದ್ದಾರೆ, ಸಂಶೋಧಕರಿದ್ದಾರೆ, ಕನ್ನಡ ಸಾಹಿತ್ಯ ಅದು ವಿಶೇಷವಾಗಿ ಎಲ್ಲರಿಗೂ ಕೂಡ ಆದರಣೀಯ ಸಾಹಿತ್ಯ. ಶ್ರೀಕ್ಷೇತ್ರದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅಭಿಮಾನದ ಸಂಗತಿ ಎಂದರು.
 ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಸಿದ್ಧತೊಂಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ನಾಲವಾರ ಶ್ರೀಕ್ಷೇತ್ರ ಇವರು ಮಾತನಾಡಿ, ಬಹಳಷ್ಟು ಜನ ಸ್ವಾಮಿಗಳು ಸ್ವತಃ ಸಾಹಿತಿಗಳಿದ್ದಾರೆ. ಅವರಿಗೆ ಸಾಹಿತ್ಯದ ಬಗ್ಗೆ, ಸಂಗೀತದ ಬಗ್ಗೆ, ಕಾವ್ಯದ ಬಗ್ಗೆ ಅಪಾರವಾದ ಅಭಿಮಾನ ಇರುತ್ತದೆ. ಇವತ್ತು ಕನ್ನಡ ಸಾಹಿತ್ಯವನ್ನು ಹೆಚ್ಚು ಬೆಳಗಿಸಿರುವ ಕೀರ್ತಿ ಮಠಾಧೀಶರಿಗೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ-ಗೋವಾ-ಆಂಧ್ರಪ್ರದೇಶ ಬೇರೆ ಬೇರೆ ರಾಜ್ಯಗಳಿಂದ ಬಂದ ಅನೇಕ ಕವಿಗಳಿಂದ ಕವನವಾಚನ ಜರುಗಿತು.

Related Articles

Back to top button