*ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೆಎಲ್ಇ ವಿದ್ಯಾರ್ಥಿಗಳ ಅಮೋಘ ಸಾಧನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯು ಜರುಗಿಸಿದ ಎಸ್ಎಸ್ಎಲ್ಇ ಪರೀಕ್ಷೆಯಲ್ಲಿ ಕೆಎಲ್ಇ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಗಳು ಅಮೋಘ ಸಾಧನೆಯನ್ನು ಗೈದಿವೆ.
ಬೆಳಗಾವಿ, ಅಂಕಲಿ, ಸವದತ್ತಿ, ಗಳತಗಾ, ನಿಪ್ಪಾಣಿ, ಕೆರೂರ, ಅಥಣಿ, ಮಾಲೂರು, ಗೋಕಾಕ, ಮಹಾಲಿಂಗಪೂರ, ಯಡ್ರಾವ, ರಾಣೇಬೆನ್ನೂರ, ಅಂಕೋಲಾ, ಧಾರವಾಡಗಳಲ್ಲಿ 17 ಕನ್ನಡ ಮಾಧ್ಯಮ ಶಾಲೆಗಳನ್ನು ಮುನ್ನಡೆಸುತ್ತಿರುವ ಸಂಸ್ಥೆಯು 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ.
ಸಂಸ್ಥೆಯ 94 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ. 37 ವಿದ್ಯಾರ್ಥಿಗಳು 95%ಕ್ಕೂ ಹೆಚ್ಚು ಅಂಕಗಳನ್ನು ತೆಗೆದುಕೊಂಡಿದ್ದರೆ, 109 ವಿದ್ಯಾರ್ಥಿಗಳು 90%ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಗಳತಗಾ ಪಿ.ಆರ್.ಚಿಕ್ಕೋಡಿ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ತನ್ವಿ ತಾನಾಜಿ ತೆಲ್ವೇಕರ್ 623/625 ಅಂಕಗಳೊಂದಿಗೆ 99.68 ಫಲಿತಾಂಶವನ್ನು ಪಡೆದಿದ್ದಾಳೆ. ನಿಪ್ಪಾಣಿಯ ಕನ್ನಡ ಮಾಧ್ಯಮ ಶಾಲೆಯ ಪ್ರಜ್ವಲ ಹನುಮಂತ ನಾಯಕ 621(ಶೇ.99.36), ಅಂಕಲಿಯ ಶಾರದಾದೇವಿ ಕೋರೆ ಹೈಸ್ಕೂಲಿನ ಅಕ್ಷತಾ ಈಶ್ವರ ಹಿಂಗ್ಲಜೆ 617(ಶೇ.98.72), ಅದೇ ಶಾಲೆಯ ಸಿದ್ಧಾರ್ಥ ರಾವಸಾಹೇಬ ಪಾಟೀಲ 615(ಶೇ.98.40), ಕೆರೂರ ಕನ್ನಡ ಮಾಧ್ಯಮ ಶಾಲೆಯ ನುಜಹತ್ ಮೆಹಬೂಬ ಮುಲ್ಲಾ 613(ಶೇ.98.08), ಬೆಳಗಾವಿ ಜಿ.ಎ.ಹೈಸ್ಕೂಲಿನ ಸಾಧನಾ ಶಿವಾನಂದ ಗುಗ್ಗರಿ 613(ಶೇ.98.08) ಅಂಕಗಳೊಂದಿಗೆ ಶಾಲೆ ಹಾಗೂ ಕೆಎಲ್ಇ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾರ್ದಿಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಗಡಿಭಾಗದಲ್ಲಿ ಕನ್ನಡ ಮೊಳಗಿಸಿದ ಕೆಎಲ್ಇ ಸಂಸ್ಥೆಯ ಶಾಲೆಗಳು :
ಉತ್ತರ ಕರ್ನಾಟದ ವಿದ್ಯಾರ್ಥಿಗಳು ಮಹಾರಾಷ್ಟ್ರದ ಪುಣೆ, ಕೊಲ್ಲಾಪುರ, ಮುಂಬಯಿಗೆ ಹೋಗಿ ಶಿಕ್ಷಣವನ್ನು ಪಡೆಯಬೇಕಾಗಿದ್ದ ಸಮಯದಲ್ಲಿ 1916ರಲ್ಲಿ ಸಪ್ತ ಶಿಕ್ಷಕರು ಇಚ್ಛಾಶಕ್ತಿಯಿಂದ ಕೆಎಲ್ಇ ಸಂಸ್ಥೆಯು ಸ್ಥಾಪನೆಗೊಂಡಿತು. ಈ ಸಪ್ತರ್ಷಿಗಳು ಬೆಳಗಾವಿಯಲ್ಲಿ ‘ಗಿಲಗಂಚಿ ಅರಟಾಳ ಹೈಸ್ಕೂಲ್’ನ್ನು ಸ್ಥಾಪಿಸಿ ಗಡಿಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಶ್ರೀಕಾರ ಹಾಕಿ ಈ ಭಾಗದ ಶೈಕ್ಷಣಿಕ ವಿಕಾಸಕ್ಕೆ ನಾಂದಿ ಹಾಡಿದರು.
ಹಂತ ಹಂತವಾಗಿ ಗಡಿಭಾಗದಲ್ಲಿರುವ ರೈತರ ಬಡಜನತೆಯ ಮಕ್ಕಳ ಶೈಕ್ಷಣಿಕ ಹಸಿವು ನೀಗಿಸುವುದಕೋಸ್ಕರ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿ ಅಕ್ಷರ ಕ್ರಾಂತಿಗೈದರು. ಕೆಎಲ್ಇ ಸಂಸ್ಥೆಯ ಬಹು ಸಂಖ್ಯಾತ ಶಾಲೆಗಳು ಗಡಿಭಾಗದಲ್ಲಿಯೇ ಇರುವುದನ್ನು ಅವಲೋಕಿಸಬೇಕು. ಬೆಳಗಾವಿ, ಅಂಕಲಿ, ಸವದತ್ತಿ, ಗಳತಗಾ, ನಿಪ್ಪಾಣಿ, ಕೆರೂರ, ಅಥಣಿ, ಮಾಲೂರು, ಗೋಕಾಕ, ಮಹಾಲಿಂಗಪೂರ, ಯಡ್ರಾವ, ರಾಣೇಬೆನ್ನೂರ, ಅಂಕೋಲಾ, ಧಾರವಾಡಗಳಲ್ಲಿ 17 ಕನ್ನಡ ಮಾಧ್ಯಮ ಶಾಲೆಗಳನ್ನು ಮುನ್ನಡೆಸುತ್ತಿದೆ.
ಸ್ಮಾರ್ಟ್ ಕನ್ನಡ ಮಾಧ್ಯಮ ಶಾಲೆಗಳು :
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರ ಇಚ್ಛಾಶಕ್ತಿಯಂತೆ ಇಂಗ್ಲೀಷ ಮಾಧ್ಯಮ ಶಾಲೆಗಳಿಗೆ ಸರಿಸಮಾನವಾಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ಅತ್ಯಂತ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಸುವ್ಯವಸ್ಥಿತ ವರ್ಗಕೋಣೆಗಳು, ಪ್ರಯೋಗಾಲಯಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ಗಳು, ಆಟದ ಮೈದಾನ, ಹೂದೋಟ ಹೀಗೆ ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣವನ್ನು ನಿರ್ಮಿಸಿದೆ.
ಎಲ್ಲಕ್ಕೂ ಮುಖ್ಯವಾಗಿ ಅತ್ಯುತ್ತಮ ಬೋಧಕ ಸಿಬ್ಬಂದಿವರ್ಗದವರಿಂದ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಸಂಸ್ಥೆಯು ಪ್ರತಿವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸರ್ವೋತ್ತಮ ಫಲಿತಾಂಶವನ್ನೂ ಹೊರತಂದಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಇಂಗ್ಲೀಷ ಭಾಷೆ ಕಬ್ಬಿಣದ ಕಡಲೆಯಾಗಬಾರದೆಂದು ಸಂಸ್ಥೆಯು ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮವಾದ ಆಂಗ್ಲ ಕಲಿಕಾ ಬೋಧನೆಯ ಕೌಶಲ, ಗಣಿತ ವಿಷಯ ಹಾಗೂ ಸ್ಕೀಲ್ಬೇಸ್ ತರಬೇತಿಯನ್ನು ನೀಡುತ್ತಾ ಬಂದಿದೆ.
ಕನ್ನಡ ಮಾಧ್ಯಮದಿಂದ ದೂರ ಸರಿಯುತ್ತಿರುವ ಇಂದಿನ ದಿನಗಳಲ್ಲಿ ಕೆಎಲ್ಇ ಸಂಸ್ಥೆಯು ಶ್ರೇಷ್ಠವಾದ ಕಲಿಕಾ ವಾತಾವರಣವನ್ನು ಹುಟ್ಟುಹಾಕಿ ಗಡಿಭಾಗದಲ್ಲಿ ಕನ್ನಡವನ್ನು ಪೋಷಿಸಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ. ಅಂತೆಯೆ ಕನ್ನಡ ಮಾಧ್ಯಮದಲ್ಲಿಯೇ ಓದಿ ಸಂಸ್ಥೆಯ ಅಸಂಖ್ಯ ವಿದ್ಯಾರ್ಥಿಗಳು ಮೆಡಿಕಲ್, ಇಂಜಿನಿಯರಿಂಗ್, ಡಿಪ್ಲೋಮಾ, ಕೃಷಿ, ಕಲಾ-ವಾಣಿಜ್ಯ-ವಿಜ್ಞಾನ ನಿಕಾಯ ಮೊಲದ್ಗೊಂಡು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.