Kannada NewsLatest

ಮಾನಸಿಕತೆ ದೇಹವನ್ನು ನಿಯಂತ್ರಿಸುತ್ತದೆ; ಧನಾತ್ಮಕ ಚಿಂತನೆ, ನಗುಮುಖ ಎಲ್ಲಾ ನೋವು ಮರೆಸಲು ದಿವ್ಯೌಷಧ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆಧುನಿಕ ಯುಗದಲ್ಲಿ ಕಾರ್ಯಭಾರ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಶೇ.30ರಷ್ಟು ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕ ಕ್ಷೋಭೆಗೆ ಒಳಗಾಗುತ್ತಿದ್ದಾರೆ. ಕುಟುಂಬ ನಿರ್ವಹಣೆ, ಕಾರ್ಯಸ್ಥಾನದಲ್ಲಿನ ತೀವ್ರವಾದ ಒತ್ತಡಗಳಿಂದ ಹೊರಬರಲು ಸಾಧ್ಯವಾಗದೇ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಅದರಲ್ಲಿಯೂ ಯುವಕರಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗಿ ಕಂಡುಬರುತ್ತಿದ್ದು, ಅವುಗಳನ್ನು ಸೂಕ್ಷ್ಮವಾಗಿ ಪರಿಹರಿಸುವ ಕಾರ್ಯ ನಡೆಯಬೇಕಿದೆ ಎಂದು ಕಾಹೇರನ ಉಸ್ತುವಾರಿ ಉಪಕುಲಪತಿ ಹಾಗೂ ಜೆಎನ್‌ಎಂಸಿ ಪ್ರಾಚಾರ್ಯ ಡಾ. ಎನ್ ಎಸ್ ಮಹಾಂತಶೆಟ್ಟಿ ತಿಳಿಸಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮನೋರೋಗ ವಿಭಾಗವು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಮಾನಸಿಕ ಆರೋಗ್ಯ ಸಮಸ್ಯೆಗಳು ತೀವ್ರಗೊಳ್ಳುತ್ತಿದ್ದು, ಅದನ್ನು ತಡೆಗಟ್ಟಲು ಎಲ್ಲರೂ ಕೂಡಿಕೊಂಡು ಕಾರ್ಯಪಥದಲ್ಲಿ ಸಾಗಬೇಕಾಗಿದೆ ಎಂದು ಹೇಳಿದರು.

Home add -Advt

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ದೈಹಿಕವಾಗಿ ಸಮರ್ಥನಾಗಿದ್ದರೆ ಸಾಲದು, ಮಾನಸಿಕ ಆರೋಗ್ಯವೂ ಅತೀ ಮುಖ್ಯ. ಮಾನಸಿಕತೆಯು ಇಡೀ ದೇಹವನ್ನು ನಿಯಂತ್ರಿಸುತ್ತದೆ. ಧನಾತ್ಮಕವಾದ ಚಿಂತನೆ ಹೊಂದಿ, ನಗುಮುಖದಿಂದ ಇರಲು ಪ್ರಯತ್ನಿಸಿ. ನಗುಮುಖವು ಎಲ್ಲವನ್ನು ಮರೆಸುತ್ತದೆ. ಮಾನಸಿಕ ಆರೋಗ್ಯವು ಮಧುಮೇಹ ಹಾಗೂ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಕಾಹೆರ ಕುಲಸಚಿವರಾದ ಡಾ. ವಿ ಎ ಕೋಠಿವಾಲೆ ಅವರು ಮಾತನಾಡಿದರು. ಮನೋರೋಗ ಹಿರಿಯ ತಜ್ಞವೈದ್ಯರಾದ ಡಾ. ಎನ್ ಎಂ ಪಾಟೀಲ ಅವರು, ವಿಶ್ವದಾದ್ಯಂತ ಮಾನಸಿಕ ಆರೋಗ್ಯದ ಕುರಿತು ಜಾಗೃತಿ, ಜನಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಲು ಕಾರ್ಯಗಾರ ಮಾಡಲಾಗುತ್ತಿದೆ. ಕಾರ್ಯಸ್ಥಳದಲ್ಲಿ ಮುಕ್ತಮನಸ್ಸಿನಿಂದ ಇರಲು ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ರಾಜೇಶ ಪವಾರ, ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ಆರಿಪ್ ಮಾಲ್ದಾರ, ಡಾ. ಸಮೀರ ಛಾಟೆ, ಡಾ. ಭೀಮಸೇನ ಟೆಕ್ಕಳಕಿ, ಡಾ.ವಿನಾಯಕ ಕೋಪರ್ಡೆ, ಡಾ. ಸಂದೀಪ ಪಾಟೀಲ, ಡಾ. ವಿಶ್ವಾಸ ಯಾದವಾಡ, ಡಾ. ಪುನಿತ ಮುತಾಲಿಕ ಮುಂತಾದವರು ಉಪಸ್ಥಿತರಿದ್ದರು.

ಎಲೆಕ್ಟ್ರಿಕಲ್ ಬೈಕ್ ತಯಾರಿಸಿದ ಅರಭಾವಿ ಮಠದ ಯುವಕ ; ಬೆನ್ನು ತಟ್ಟಿದ ಶಾಸಕ ಬಾಲಚಂದ್ರ ಜಾರಕಿಹೊಳಿ

https://pragati.taskdun.com/latest/electric-bikearabhavi-mathaamit-balakundi/

Related Articles

Back to top button