
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭ್ರಷ್ಟಾತಿ ಭ್ರಷ್ಟ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ದು ನನ್ನ ವಿರುದ್ಧ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕಟ್ಟಾ ಮಾಡುತ್ತಿರುವ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಸವಾಲು ಹಾಕಿದ್ದಾರೆ.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ದು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಭೈರತಿ ಸುರೇಶ್, ನನ್ನ ಕ್ಷೇತ್ರಕ್ಕೆ ಸರ್ಕಾರದಿಂದ ಬಿಡುಗಡೆಯಾಗಿರುವುದೇ ಕೇವಲ 90 ಕೋಟಿ ಅನುದಾನ ಮಾತ್ರ. ಮಾಜಿ ಸಚಿವರು ಹೇಳಿದಂತೆ 650 ಕೋಟಿ ಅನುದಾನ ಬಿಡುಗಡೆಯಾಗಿದ್ದರೆ ಹೆಬ್ಬಾಳ ವಿಧಾನಸಭಾ ಕ್ಷೇತ್ರವನ್ನು ಸಿಂಗಾಪುರ ಮಾಡಿಬಿಡುತ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ.
ಸರ್ಕಾರ ನೀಡಿರುವ 90 ಕೋಟಿ ಅನುದಾನದಲ್ಲಿ ಕಾಮಗಾರಿ ಆರಂಭಿಸಲು ಸಾಲುತ್ತಿಲ್ಲ. ಹೀಗಿರುವಾಗ ಅಧಿಕಾರಿಗಳು ಭ್ರಷ್ಟಾಚಾರ ನಡೆಸಲು ಹೇಗೆ ಸಾಧ್ಯ? ಅದೂ ಅಲ್ಲದೇ ನಾನು ವಿರೋಧ ಪಕ್ಷದ ಶಾಸಕ. ವಿರೋಧ ಪಕ್ಷದ ಶಾಸಕನ ಕ್ಷೇತ್ರಕ್ಕೆ 650 ಕೋಟಿ ಅನುದಾನ ಯಾರು ಕೊಡುತ್ತಾರೆ? ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಓರ್ವ ಸುಳ್ಳಿನ ರಾಜ ಇದ್ದಂತೆ. ಅವರು ಹೇಳಿದಂತೆ 650 ಕೋಟಿ ಅನುದಾನ ಬಿಡುಗಡೆ ಮಾಡಿದ್ದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ನನ್ನ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದೇನೆ. ಸರ್ಕಾರದಿಂದ ನನಗೆ ಬಿಡುಗಡೆಯಾಗಿರುವುದು ಕೇವಲ 90 ಕೋಟಿ ಮಾತ್ರ. ಇನ್ನು ಕಟ್ಟಾ ಆರೋಪ ಮಾಡಿರುವಂತೆ ನನಗೆ ಕಮಿಷನ್ ಪಡೆದು ಜೀವನ ನಡೆಸುವ ದು:ಸ್ಥಿತಿ ಬಂದಿಲ್ಲ. ಅಂತಹ ಕೆಲಸವನ್ನು ನಾನು ಮಾಡುವುದೂ ಇಲ್ಲ ಎಂದು ಕಿಡಿಕಾರಿದರು.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೇಲೆ ಸಿಬಿಐ, ಇಡಿ ಸೇರಿ 40 ಕೇಸ್ ಗಳಿವೆ. ಕ್ಯಾನ್ಸರ್ ಕಾಯಿಲೆಯಿದೆ ಎಂದು ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದು ಹೊರಗಿದ್ದಾರೆ. ಅಂತಹ ವ್ಯಕ್ತಿ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂಬುದೇ ದುರ್ದೈವ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕನ ವಿರುದ್ಧ 30% ಕಮಿಷನ್ ಆರೋಪ