*ಬೆಳಗಾವಿ ಡಿಸಿ ಕಚೇರಿ ಬಳಿ ಗಲಾಟೆ ತಡೆಯಲು ಹೋದ ಕಾನ್ಸ್ಟೇಬಲ್ ಮೇಲೆ ಪುಂಡರಿಂದ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಯುವಕರ ಎರಡು ಗುಂಪುಗಳ ನಡುವೆ ಸಾರ್ವಜನಿಕವಾಗಿ ಮಾರಾಮಾರಿ ನಡೆದಿದ್ದು ಜಗಳ ಬಿಡಿಸಲು ಹೋದ ಪೊಲೀಸ್ ಕಾನ್ಸ್ಟೇಬಲ್ ಮೇಲೆಯೇ ಪುಂಡರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಯುವಕರ ಎರಡು ಗುಂಪುಗಳ ಮಧ್ಯೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಮಾತಿನ ಚಕಮಕಿ ನಡೆದು, ಅದು ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ರಸ್ತೆಯಲ್ಲೇ ಇವರು ಭೀಕರವಾಗಿ ಹೊಡೆದಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಮಾರ್ಕೇಟ್ ಪೊಲೀಸ್ ಠಾಣೆಯ ಪೇದೆ ಮಲ್ಲಿಕಾರ್ಜುನ ಗುಂಜೀಕರ ಅವರು ತಕ್ಷಣವೇ ಮಧ್ಯಪ್ರವೇಶಿಸಿದ್ದಾರೆ.
ಗಲಾಟೆ ಮಾಡದಂತೆ ಬುದ್ಧಿ ಹೇಳಿ ಜಗಳ ಬಿಡಿಸಲು ಮುಂದಾದಾಗ, ಉದ್ಧಟತನ ತೋರಿದ ಪುಂಡ ಯುವಕರು ಪೊಲೀಸ್ ಪೇದೆಯ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೇದೆ, ತಕ್ಷಣವೇ ಮಾರ್ಕೇಟ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮಾರ್ಕೇಟ್ ಠಾಣೆಯ ಸಿಪಿಐ ಜೆ.ಎಂ. ಕಾಲಿಮಿರ್ಚಿ ಹಾಗೂ ಸಿಬ್ಬಂದಿ ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸಿದ್ದಾರೆ. ಪುಂಡರಿಗೆ ರಸ್ತೆಯಲ್ಲೇ ಕಪಾಳಮೋಕ್ಷ ಮಾಡಿ, ಸರಿಯಾದ ಧರ್ಮದೇಟು ನೀಡಿ ವಶಕ್ಕೆ ಪಡೆದಿದ್ದಾರೆ. ಬಳಿಕ ಎಲ್ಲರನ್ನೂ ಮಾರ್ಕೇಟ್ ಪೊಲೀಸ್ ಠಾಣೆಗೆ ಎಳೆದೊಯ್ದು ಲಾಕಪ್ ಗೆ ಹಾಕಿದ್ದಾರೆ.


