*ಕೆಪಿಎಸ್ಸಿ ಹಗರಣ: ಬೆಳಗಾವಿಯಲ್ಲಿ ಇಡಿ ಶೋಧ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯಾದ್ಯಂತ ಭಾರೀ ಸದ್ದು ಮಾಡಿರುವ ಕೆಪಿಎಸ್ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ, ಹಗರಣದ ಬೆನ್ನು ಹತ್ತಿರುವ ಇಡಿ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದ್ದು, ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲೂ ದಾಳಿ ನಡೆಸಲಾಗಿದೆ.
ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭರ್ಜರಿ ದಾಳಿ ನಡೆಸಿದ್ದಾರೆ. ಕಿತ್ತೂರಿನ ಬೀಡಿ ರಸ್ತೆಯಲ್ಲಿರುವ ಸದಾಶಿವ ನಗರದ ಕುಬೇರ ಜಾಯಕ್ಕನವರ ಎಂಬುವವರ ಮನೆ ಮೇಲೆ ಮುಂಜಾನೆಯೇ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಕುಬೇರ ಜಾಯಕ್ಕನವರ ತಂಗಿಯ ಪುತ್ರ ಅಭಿಷೇಕ್ ಮಹಾದೇವ ದೇವಲಾಪುರ, ಇತ್ತೀಚೆಗೆ ನಡೆದ ಪಶು ವೈದ್ಯಾಧಿಕಾರಿ ಪರೀಕ್ಷೆಯ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ಡೀಲಿಂಗ್ ಕುರಿತು ಸಾಕ್ಷ್ಯ ಸಂಗ್ರಹಿಸಲು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಮೊದಲು ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿರುವ ಅಭಿಷೇಕ್ ಮನೆಗೆ ಇಡಿ ಅಧಿಕಾರಿಗಳು ತೆರಳಿದ್ದರು. ಆದರೆ, ಅಭಿಷೇಕ್ನ ಪಾಲಕರು ಕಿತ್ತೂರಿನ ಸದಾಶಿವ ನಗರದಲ್ಲಿರುವ ಸಂಬಂಧಿ ಕುಬೇರ ಅವರ ಮನೆಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾದ ತಕ್ಷಣ, ಅಧಿಕಾರಿಗಳ ತಂಡ ನೇರವಾಗಿ ಕಿತ್ತೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.




