Karnataka NewsLatest

ಮೊಬೈಲ್ ಫೋನ್ ಗಾಗಿ ಜಲಾಶಯವನ್ನೇ ಖಾಲಿ ಮಾಡಿಸಿದ ಅಧಿಕಾರಿ

ಪ್ರಗತಿವಾಹಿನಿ ಸುದ್ದಿ, ರಾಯಪುರ: ಕಳೆದುಕೊಂಡ ವಸ್ತುವಿನ ಮೇಲೆ ಅತಿಯಾದ ವ್ಯಾಮೋಹ ಏನನ್ನೂ ಮಾಡಿಸಬಹುದು ಎಂಬುದಕ್ಕೆ ಅಧಿಕಾರಿಯೊಬ್ಬರು ಸಾಕ್ಷಿಯಾಗಿದ್ದಾರೆ.

ಛತ್ತೀಸ್​ಗಢದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‌ನ ಖೇರ್ಕಟ್ಟಾ ಅಣೆಕಟ್ಟೆಯಲ್ಲಿ ನಡೆದಾಡುತ್ತಿದ್ದಾಗ ಕೈಯ್ಯಲ್ಲಿದ್ದ ಮೊಬೈಲ್ ಫೋನ್ ತಪ್ಪಿ ಜಲಾಶಯದಲ್ಲಿ ಬಿದ್ದಿದ್ದಕ್ಕೆ ಜಲಾಶಯವನ್ನೇ ಖಾಲಿ ಮಾಡಿಸಿರುವ ಅಧಿಕಾರಿ ಈಗ ಅಮಾನತುಗೊಂಡಿದ್ದಷ್ಟೇ ಅಲ್ಲ, ಆ ಭಾಗರ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆಹಾರ ನಿರೀಕ್ಷಕ ರಾಜೇಶ್​ ವಿಶ್ವಾಸ್​ ಎಂಬುವವರು ಖೇರ್ಕಟ್ಟಾ ಅಣೆಕಟ್ಟೆ ಮೇಲೆ ಭಾನುವಾರ ಸಂಜೆ ವಾಯುವಿಹಾರ ನಡೆಸುತ್ತಿದ್ದರು. ಈ ವೇಳೆ ಅವರ ಕೈಯ್ಯಲ್ಲಿದ್ದ 1 ಲಕ್ಷ ರೂ. ಬೆಲೆ ಬಾಳುವ ಮೊಬೈಲ್​ ಫೋನ್​ ಜಾರಿ ನೀರಿಗೆ ಬಿತ್ತು. ಮೊದಲಿಗೆ ನೀರಿನಲ್ಲಿ ಎಷ್ಟೇ ಜಾಲಾಡಿದರೂ ಮೊಬೈಲ್ ಫೋನ್ ಸಿಗಲಿಲ್ಲ. ಹೀಗಾಗಿ ರಾಜೇಶ ವಿಶ್ವಾಸ್ ಅವರು ಜಲಾಶಯವನ್ನೇ ಖಾಲಿ ಮಾಡಿಸಲು ಕೆಳ ಹಂತದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

 ಅವರ ಆದೇಶ ಪಾಲನೆಗೆ ಮುಂದಾದ ಅಧಿಕಾರಿಗಳು ಪಂಪ್ ಗಳನ್ನು ತಂದು 8 ಸಾವಿರ ರೂ. ಮೌಲ್ಯದ ಡೀಸೆಲ್ ಬಳಸಿ ಸುಮಾರು 21 ಲಕ್ಷ ಲೀಟರ್​ ನೀರನ್ನು ಹೊರತೆಗೆದು ಮೊಬೈಲ್​ ಹುಡುಕಿ ಕೊಟ್ಟಿದ್ದಾರೆ. ಸೋಮವಾರದಿಂದ-ಗುರುವಾರದ ವರೆಗೆ 21 ಲಕ್ಷ ನೀರು ಪೋಲಾಗಿದ್ದು ಇದನ್ನು 1500 ಸಾವಿರ ಎಕರೆ ಕೃಷಿ ಭೂಮಿಗೆ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.

ಇದರಿಂದ ಕೆಂಡಾಮಂಡಲವಾಗಿರುವ ರೈತರು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದು ಸದ್ಯ ರಾಜೇಶ ವಿಶ್ವಾಸ್ ಅವರನ್ನು ಅಮಾನತು ಮಾಡಲಾಗಿದೆ. ಈ ಮಧ್ಯೆಯೂ ರಾಜೇಶ ವಿಶ್ವಾಸ್ ಅವರು ತಮ್ಮ ನಡೆ ಸಮರ್ಥಿಸಿಕೊಂಡಿದ್ದು, ಜಲಾಶಯದ ನೀರು ನಿರುಪಯುಕ್ತ ಹಾಗೂ ಕಲುಶಿತವಾಗಿತ್ತು. ಅದರಿಂದ ನಷ್ಟವೇನೂ ಇಲ್ಲ, ಎಂದಿದ್ದಾರಲ್ಲದೆ ನನ್ನ ಮೊಬೈಲ್ ನಲ್ಲಿ ಇದ್ದ ಸಂಪರ್ಕ ಸಂಖ್ಯೆಗಳು ಮಹತ್ವದ್ದಾಗಿದ್ದು ಅದಕ್ಕಾಗಿ ನೀರು ಖಾಲಿ ಮಾಡಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

https://pragati.taskdun.com/from-today-betageri-is-the-eye-of-lord-maruti/
https://pragati.taskdun.com/linganamath-village-panchayat-locked-and-protested/
https://pragati.taskdun.com/life-life-threatening-tobacco-this-is-the-perfect-opportunity-to-be-free-from-addiction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button