Belagavi NewsBelgaum NewsEducationKannada NewsKarnataka NewsNationalPolitics

*ಆಧುನಿಕತೆಯಿಂದಾಗಿ ಕಿರಿದಾಗುತ್ತಿದೆ ವಿಶಾಲವಾದ ಜಗತ್ತು: ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗದಗಲ ಮುಗಿಲಗಲವಾಗಿರುವ ಭಗವಂತನ ಸ್ವರೂಪ ಇಷ್ಟಲಿಂಗ ರೂಪದಲ್ಲಿ ಕಿರಿದಾಗಿ ಅಂಗೈಗೆ ಬಂದಿರುವಂತೆ‌ ಈ ವಿಶಾಲವಾದ ಜಗತ್ತು‌ ಆಧುನಿಕ ತಂತ್ರಜ್ಞಾನದಿಂದಾಗಿ ಕಿರಿದಾಗುತ್ತಿದೆ. ಟ್ಯಾಬ್, ಮೊಬೈಲ್‌ ಗಳಂತಹ ತಂತ್ರಜ್ಞಾನದಿಂದ ಜಗತ್ತಿನ ಮಾಹಿತಿ ಇಂದು  ಅಂಗೈಯಲ್ಲಿ ದೊರೆಯುತ್ತಿದ್ದು,  ವಿಶಾಲವಾದ ಜಗತ್ತು ಕಿರಿದಾಗುತ್ತಿದೆ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. 

ಅವರು ಇಂದು ಇಲ್ಲಿನ ಶಿವಬಸವ ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಎಸ್. ಜಿ. ಸಂಬರಗಿಮಠ ಸಭಾಭವನದಲ್ಲಿ ಹಮ್ಮಿಕೊಂಡ ನೂತನ ಸಿದ್ಧರಾಮೇಶ್ವರ ಸಿ.ಬಿ.ಎಸ್‌.ಇ. ಶಾಲೆಯ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ನೇತೃತ್ವ ನುಡಿಗಳನ್ನಾಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ತಮ್ಮ ಮಕ್ಕಳನ್ನು ಭವಿಷ್ಯದ ಇಂಜನಿಯರ್ ಹಾಗೂ ವೈದ್ಯರನ್ನಾಗಿಸಬೇಕೆಂಬ ಹಂಬಲ ಎಲ್ಲಾ ಪಾಲಕರಿಗಿರುತ್ತದೆ. ಆದರೆ ಮಕ್ಕಳ ಶಿಕ್ಷಣದ ಅಡಿಪಾಯ ಸರಿಯಾಗಿರದೇ ಇರುವುದರಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಉತ್ತಮ ಸಂಸ್ಕಾರದೊಂದಿಗೆ ಕಡಿಮೆ ವೆಚ್ಚದಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಸದುದ್ದೇಶದಿಂದ ಸಿಬಿಎಸ್ಇ ಶಾಲೆ ಪ್ರಾರಂಭಿಸಲಾಗಿದ್ದು ನಾಡಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪೋತದಾರ್ ಅಂತರಾಷ್ಟ್ರೀಯ ಶಾಲೆಯ ಪ್ರಾಚಾರ್ಯ ರಾಜ್ ಹುಲಮನಿ ಓರ್ವ ವಿದ್ಯಾರ್ಥಿಯ ಶೇ.95 ರಷ್ಟು ಮೆದುಳಿನ ಬೆಳವಣಿಗೆ ಮೊದಲ  ಹತ್ತು ವರ್ಷದೊಳಗೆ ಆಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಬಾಲ್ಯದಲ್ಲಿರುವಾಗ ಉತ್ತಮ ಶಾಲೆಯ ಆಯ್ಕೆ ಬಹಳ ಪ್ರಮುಖವಾದುದು ಎಂದರು. ಇದೇ ಸಂದರ್ಭದಲ್ಲಿ ಅವರು 21 ನೇ ಶತಮಾನಕ್ಕೆ ತಕ್ಕುದಾದ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಸಿದ್ಧರಾಮೇಶ್ವರ ಸಿ.ಬಿ.ಎಸ್.ಇ. ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವ ಪಾಲಕರನ್ನು ಅವರು ಅಭಿನಂದಿಸಿದರು. 

Home add -Advt

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ  ಎಸ್.ಪಿ. ಹಿರೇಮಠ ದೇಶದಲ್ಲಿ ಎಲ್ಲಾ ಶಾಲೆಗಳು ಶಿಕ್ಷಣ ನೀಡುತ್ತವೆ. ಆದರೆ ಸಂಸ್ಕಾರಯುತ ಶಿಕ್ಷಣ ದೊರೆಯುವುದು ಕಷ್ಟ. ಸಂಸ್ಕಾರಯುತ ಶಿಕ್ಷಣದಿಂದಲೇ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.

ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ್ ರೊಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಸಿಬಿಎಸ್ಇ ಶಾಲೆಯ ಪ್ರಾಚಾರ್ಯ ಡಾ. ಸಿ.ಬಿ. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಸವಿತಾ ರಾವ್, ಶಿಲ್ಪಾ ಅಮಟೆ ನಿರೂಪಿಸಿದರು. ಕೊನೆಗೆ ಸವಿತಾ ಎಚ್. ವಂದಿಸಿದರು.

Related Articles

Back to top button