
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸವದತ್ತಿ ತಾಲ್ಲೂಕಿನ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ರಾತ್ರಿ ಶಿವಯೋಗೀಶ್ವರ ಮಹಾರಾಜರು, ಅಡವಿಲಿಂಗ ಮಹಾರಾಜರ ನೇತೃತ್ವದಲ್ಲಿ ದೇವಿಗೆ ಚಿನ್ನ ಲೇಪಿತ ₹4.5 ಲಕ್ಷ ಮೌಲ್ಯದ ಸೀರೆಯನ್ನು ಅರ್ಪಿಸಿ ದೇವಿಗೆ ಉಡಿ ತುಂಬಿದರು.
ವಿಜಯಪುರ ಜಿಲ್ಲೆಯ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರ ಸಂಕಲ್ಪದಂತೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಘಟ್ಟದ ಅಡವಿಲಿಂಗ ಮಹಾರಾಜರು ₹4.5 ಲಕ್ಷ ಮೌಲ್ಯದ ಸೀರೆಯನ್ನು ರೇಣುಕಾ ಯಲ್ಲಮ್ಮ ದೇವಿಗೆ ಗುರುವಾರ ಅರ್ಪಿಸಿದರು.
1955ರಲ್ಲಿ ಜಂಬಗಿಯ ಪ್ರಭುದೇವರ ಬೆಟ್ಟದ ಶಿವಯೋಗೀಶ್ವರ ಮಹಾರಾಜರು ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಆಗ ದೇವಿಗೆ ಇಂಥ ಸೀರೆ ನೀಡುವುದಾಗಿ ಬೇಡಿಕೊಂಡಿದ್ದರು. 70 ವರ್ಷಗಳ ನಂತರ, ಕಾಶಿಯ ಬನಾರಸ್ನಲ್ಲಿ ರೇಷ್ಮೆಯಿಂದ ತಯಾರಿಸಿದ ಮತ್ತು ಚಿನ್ನದ ಝರಿಗಳನ್ನು ಒಳಗೊಂಡ ಸೀರೆಯನ್ನು ದೇವಿಗೆ ಅರ್ಪಿಸಿ, ಉಡಿ ತುಂಬಿ ಹರಕೆ ತೀರಿಸಿದರು.
ವೀರಘಟ್ಟದ ಅಡವಿಲಿಂಗ ಮಹಾರಾಜರು, ವಿವೇಕ ಚಿಂತಾಮಣಿ ಶ್ರೀಗಳು, ವಿಜಯಪುರದ ಉದ್ಯಮಿ ಬಾಬುರಾಯಗೌಡ ಬಿರಾದಾರ, ಕಲಾವತಿ ಬಿರಾದಾರ, ಜ್ಞಾನಸಿಂಧು ಶ್ರೀಗಳು, ಬಯಲು ಬಸವೇಶ್ವರ ಶ್ರೀಗಳು ಇದ್ದರು.