ಎಲ್ಲ ಕಡೆಯೂ ದೊಡ್ಡ ಪ್ರಮಾಣದಲ್ಲಿ ಸ್ವಾಗತ ಸಿಗುತ್ತಿದೆ – ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನ ಪರಿಷತ್ ಚುನಾವಣೆಗಾಗಿ ಬಿಜೆಪಿ 4 ತಂಡಗಳಲ್ಲಿ ನಡೆಸುತ್ತಿರುವ ಜನಸ್ವರಾಜ್ ಸಮಾವೇಶಕ್ಕೆ ಎಲ್ಲ ಕಡೆಯೂ ದೊಡ್ಡ ಪ್ರಮಾಣದಲ್ಲಿ ಸ್ವಾಗತ ಸಿಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ಸಂಜೆ ಜನಸ್ವರಾಜ್ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಎಲ್ಲರನ್ನೂ ತಲುಪಿದ್ದಾರೆ. ವಿಶ್ವವೇ ಭಾರತದ ಕಡೆ ನೋಡುವಂತೆ ಮಾಡಿದ್ದಾರೆ. ಇದು ರೈತರ ಸರಕಾರ. ರೈತರಿಗೆ ಸಾಕಷ್ಟು ಸೌಲಭ್ಯ ನೀಡಿದ್ದಾರೆ. ರಾಜ್ಯದಲ್ಲೂ ನಮ್ಮ ಸರಕಾರ ಕ್ರಾಂತಿಕಾರಕ ಕೆಲಸ ಮಾಡಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಸವಲತ್ತು ಕೊಟ್ಟಿದ್ದೇನೆ. ಎಲ್ಲರೂ ನೆಮ್ಮದಿಯಿಂದ ಬದುಕುವಂತೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಹಿಂದೆ ಕಾಂಗ್ರೆಸ್ ಹಣ, ತೋಳ್ಬಲದಿಂದ ಚುನಾವಣೆ ಗೆಲ್ಲುತ್ತಿತ್ತು. 75 ವರ್ಷದ ಕಾಂಗ್ರೆಸ್ ಆಡಳಿತ ಸಮುದ್ರದ ಉಪ್ಪು ನೀರಿನಂತಾಗಿತ್ತು. ಅಲ್ಲಿ ವಜ್ರಗಳೇ ತುಂಬಿದ್ದರೂ ನೀರು ಕುಡಿಯಲು ಸಾಧ್ಯವಿಲ್ಲ. ಈಗ ದೇಶದಲ್ಲಿ ಕಾಂಗ್ರೆಸ್ ನಿರ್ಮೂಲನೆಯಾಗುತ್ತಿದೆ ಎಂದರು.
ನೀರಾವರಿ ಯೋಜನೆಗಳ ಕುರಿತು ಹೆಚ್ಚಿನ ಹೋರಾಟ ಮಾಡಿರುವ ಮಹಾಂತೇಶ ಕವಟಗಿಮಠ ಅವರಿಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಯಡಿಯೂರಪ್ಪ ವಿನಂತಿಸಿದರು.
ನ.23ರಂದು ಬೆಳಗಾವಿಯಲ್ಲಿ ದಿಗ್ಗಜರ ನಾಮಪತ್ರ ಸಲ್ಲಿಕೆ; ಲಖನ್ ಸ್ಪರ್ಧೆ (?) ಸೃಷ್ಟಿಸಿದ ಆತಂಕ




