Kannada NewsLatest

ವೈಯಕ್ತಿಕ ಜೀವನ, ಸಮುದಾಯಗಳಿಗೆ ವೈದ್ಯರ ಕೊಡುಗೆ ಗುರುತಿಸುವ ಈ ದಿನ

ಲೇಖನ:ಬ್ರ.ಕು.ವಿಶ್ವಾಸ ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
9483937106.

ರಾಷ್ಟ್ರೀಯ ವೈದ್ಯರ ದಿನವು ವೈಯಕ್ತಿಕ ಜೀವನ ಮತ್ತು ಸಮುದಾಯಗಳಿಗೆ ವೈದ್ಯರ ಕೊಡುಗೆಗಳನ್ನು ಗುರುತಿಸುವ ದಿನವಾಗಿದೆ. ಹಲವು ದೇಶಗಳಲ್ಲಿ ಇದನ್ನು ಆಚರಿಸಲಾಗುತ್ತ್ತಿದ್ದರೂ, ಕೆಲವು ರಾಷ್ಟ್ರಗಳಲ್ಲಿ ಈ ದಿನ ರಜಾದಿನವೆಂದು ಗುರುತಿಸಲಾಗಿದೆ. ರೋಗಿಗಳು ಮತ್ತು ಆರೋಗ್ಯ ಸೇವೆ ಉದ್ಯಮದ ಪ್ರಾಯೋಜಕರು ಆಚರಿಸಬೇಕೆಂದು ಇದ್ದರೂ ಇದನ್ನು ಸಾಮಾನ್ಯವಾಗಿ ಆರೋಗ್ಯ ರಕ್ಷಣಾ ಸಂಸ್ಥೆಗಳಿಂದ ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ “ಸ್ಥಿತಿಸ್ಥಾಪಕತ್ವವನ್ನು ಆಚರಿಸುವುದು ಮತ್ತು ಕೈಗಳನ್ನು ಗುಣಪಡಿಸುವುದು”.

ಭಾರತದಲ್ಲಿ ಪ್ರತಿವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಿಸಲಾಗುತ್ತದೆ. ಜಗತ್ತಿನಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಕರಿಮೋಡ ಕವಿದಾಗ ಜನಸಾಮಾನ್ಯರ ರಕ್ಷಣೆಯಲ್ಲಿ ವೈದ್ಯರ ಪಾತ್ರ ಬಹುಮುಖ್ಯವಾಗಿರುತ್ತದೆ. ಅವರು ತಮ್ಮ ಸರ್ವಸ್ವವನ್ನು ಅರ್ಪಣೆ ಮಾಡಿ ಸೇವೆಗಾಗಿ ನಿಂತಿರುತ್ತಾರೆ. ಅದಕ್ಕೆ ಅವರನ್ನು “ವೈದ್ಯೋ ನಾರಾಯಣೋ ಹರಿ: ಧನ್ವಂತರಿ” ಎಂದು ಮಹಿಮೆ ಮಾಡುತ್ತಾರೆ. ಆಯುರ್ವೇದ, ಯೋಗ, ನ್ಯಾಚರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಮುಂತಾದ (ಆಯುಷ್) ಪದ್ಧತಿಯಲ್ಲಿ ಸೇವೆ ಸಲ್ಲಿಸುವ ಎಲ್ಲರೂ ವ್ಯೆದ್ಯರು. ಪ್ರಾಚೀನ ಭಾರತದಲ್ಲಿ ಐದು ಮುಖ್ಯ ವೈದ್ಯರೆಂದರೆ ಆತ್ರೆಯ, ಸುಶ್ರುತ, ಚರಕ, ವಾಘಭಟ್ಟ, ಮಧ್ವಚಾರ್ಯ.

ವಿಶ್ವದಲ್ಲ್ಲಿ ಕೊರೊನಾ (ಕೋವಿಡ್-19) ಮಹಾಮಾರಿ ಎರಡು ವರ್ಷ ಕಳೆದರೂ ಸಂಪೂರ್ಣವಾಗಿ ಮಾಯವಾಗಿಲ್ಲ. ಅದರ ಬಹುರೂಪಗಳಾದ ಡೆಲ್ಟಾಫ್ಲಸ್, ಒಮಿಕ್ರಾನ್ ಬಿ.ಎ-2, ಬಿ.ಎ-5 ಮತ್ತು ಜೊತೆಗೆ ಪ್ಲೇಗ್, ಫ್ಲೂ, ಏಡ್ಸ್, ಎಬೋಲಾ ಇತರ ರೋಗಗಳು ತಾಂಡವವಾಡುತ್ತಿವೆ. ಕರ್ಕರೋಗ, ಮಧುಮೇಹ, ರಕ್ತದೊತ್ತಡ, ಸಂಧಿವಾತ, ನರದೌರ್ಬಲ್ಯ ಮುಂತಾದ ರೋಗಗಳು ಭಾರತದಲ್ಲಿ ಅಗ್ರಸ್ಥಾನ ಪಟೆದಿವೆ. ಇದರ ಜೊತೆಗೆ ಅನೇಕ ವಿಕಟ ಪರಿಸ್ಥಿತಿಗಳು, ಅಪಘಾತಗಳು, ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಸಂಕಟಕಾಲದಲ್ಲಿ ವೈದ್ಯರು ಪ್ರಮುಖ ಪಾತ್ರವನ್ನು ನಿಭಾಯಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸುರಕ್ಷೆ ಹಾಗೂ ಸಾಮಾಜಿಕ ಅರೋಗ್ಯ ಕಾಪಾಡಲು ಅವರ ಪ್ರಯತ್ನ ಶ್ಲಾಘನೀಯವಾಗಿದೆ.

ಇತ್ತೀಚಿನ ಉದಾಹರಣೆ ಅಂದರೆ ಒರಿಸ್ಸಾದಲ್ಲಿ ಸಂಭವಿಸಿದ ಅತಿ ದೊಡ್ಡ ರೈಲು ದುರಂತದಲ್ಲಿ ವೈದ್ಯರು ಮಾಡಿರುವ ಅಮೋಘ ಮತ್ತು ನಿರಂತರ ಸೇವೆ ಉಲ್ಲೇಖನೀಯವಾಗಿದೆ.

ಈ ರೀತಿಯಾಗಿ ವೈದ್ಯರು ದೇಶ-ರಕ್ಷಣೆ ಕಾರ್ಯವನ್ನು ಮಾಡುತ್ತಾರೆ. ಆದರೆ ಅನೇಕ ಮಹಾಮಾರಿಗಳಿಂದ ರಕ್ಷಣೆ ಹಾಗೂ ದೀರ್ಘಾಯುಷ್ಯ ಕೊಡುವ ಜವಾಬ್ದಾರಿಯನ್ನು ವೈದ್ಯರು ನಿಭಾಯಿಸುತ್ತಾರೆ. ಯುದ್ಧದಲ್ಲಿ ಸೈನಿಕರು ಘಾಯಗೊಂಡಾಗ ಅವರನ್ನು ವೈದ್ಯರು ಔಷಧೋಪಚಾರ ಮಾಡುತ್ತಾರೆ. ಯಾರು ತಮ್ಮ ಜೀವವನ್ನು ಲೆಕ್ಕ್ಕಿಸದೇ ಬೇರೆಯವರ ರಕ್ಷಣೆ ಮಾಡುತ್ತಾರೆಯೋ ಅವರೇ ನಿಜವಾದ ವೈದ್ಯರು. ಅವರು ಮಾಡುವ ನಿಸ್ವಾರ್ಥ ಸೇವೆಯನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯ.

ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಜುಲೈ 1, 1991 ರಂದು ಡಾ. ಭಿಧಾನಚಂದ್ರ ರಾಯ್‍ರವರು ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆಯ ಸ್ಮರಣಾರ್ಥ ಆಚರಿಸಲಾಯಿತು. ಜುಲೈ 1 ಅವರ ಸ್ಮೃತಿದಿನ ಮತ್ತು ಜನ್ಮದಿನವಾಗಿರುವುದು ವಿಶೇಷ. ಡಾ. ಭಿಧಾನ ಚಂದ್ರ ರಾಯ್‍ರವರು ಸುಪ್ರಸಿದ್ಧ ವೈದ್ಯರು, ಸ್ವಾತಂತ್ರ್ಯ ವೀರರು, ಶಿಕ್ಷಣತಜ್ಞರು ಮತ್ತು ರಾಜಕಾರಣಿ ಆಗಿದ್ದರು. ಅವರು 14 ವರ್ಷಗಳ (1948-1962) ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. 1961 ರಲ್ಲಿ ಭಾರತ ರತ್ನ ನೀಡಿ ಅವರನ್ನು ಗೌರವಿಸಲಾಯಿತು. ಅವರು ತಮ್ಮ ಅಮೂಲ್ಯ ಜೀವನವನ್ನು ಲೋಕಕಲ್ಯಾಣಕ್ಕಾಗಿ ಮುಡುಪಾಗಿಟ್ಟಿದ್ದರು. ಅನೇಕರ ಸೇವೆ ಮಾಡಿ ಪ್ರೇರಣೆಯನ್ನು ನೀಡಿದರು. ಮಹಾತ್ಮ ಗಾಂಧೀಜಿಯವರಿಗೂ ಅವರು ವೈದ್ಯರಾಗಿದ್ದರು.

ವೈದ್ಯರು ಸಮಾಜದಲ್ಲಿ ಒಂದು ಮಹತ್ವದ ಪಾತ್ರ ನಿಭಾಯಸುತ್ತಾರೆ. ರೋಗಿಗಳಿಗೋಸ್ಕರ ತಮ್ಮ ಜೀವನವನ್ನು ಸರ್ಮಪಿತ ಮಾಡುತ್ತಾರೆ. ಕಾಯಿಲೆಗಳಿಂದ ಬೇಗ ಗುಣಪಡಿಸಲು ಸಹಾಯ ಮಾಡುತ್ತಾರೆ. ಸದಾ ನಿರೋಗಿಯಾಗಿರಲು ಮಾರ್ಗದರ್ಶನ ನೀಡುತ್ತಾರೆ. ಅನೇಕ ವೈದ್ಯರು ಮಾಡಿರುವ ವಿಶೇಷ ಮತ್ತು ನಿಸ್ವಾರ್ಥ ಸೇವೆಗಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆಯಾದ ರಾಜಯೋಗ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಆರೋಗ್ಯ ವಿಭಾಗವು ತಮ್ಮ ಸೇವಾಕೇಂದ್ರಗಳಲ್ಲಿ ಜುಲೈ 1, ರಂದು ಅವರನ್ನು ಗೌರವಿಸಿ ಸನ್ಮಾನ ಮಾಡಲಿದೆ. ನಶಾಮುಕ್ತ ಭಾರತ ನಿರ್ಮಾಣಕ್ಕಾಗಿ ಸರ್ಕಾರದ ಜೊತೆಗೆ ಸಂಸ್ಥೆಯ ಆರೋಗ್ಯ ವಿಭಾಗವು ಒಪ್ಪಂದ ಮಾಡಿಕೊಂಡಿದೆ.

ಸಾಮಾನ್ಯವಾಗಿ ವ್ಯೆದ್ಯರು ದೇವರಲ್ಲಿ ನಂಬಿಕೆ ಇಟ್ಟು ಕಾಯಕ ಮಾಡುತ್ತಾರೆ. ರೋಗಿಗಳಿಗೆ ಭಗವಂತನ ಮೇಲೆ ಭಾರ ಹಾಕಿ ಎಂದು ಹೇಳುತ್ತಾರೆ. ಸರ್ವೊಚ್ಚ ವೈದ್ಯನಾದ ನಿರಾಕಾರ ಭಗವಂತ ಎಲ್ಲಾ ವೈದ್ಯರಿಗೆ ಆರೋಗ್ಯ, ಆಯುಷ್ಯ, ನೆಮ್ಮದಿ ಮತ್ತು ಶಾಂತಿ ನೀಡಲೆಂದು ಹಾರೈಸೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button