*ಮೂರು ಮಕ್ಕಳ ಸಾಕ್ಷಿ: ಹಂತಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬೆಳಗಾವಿ ಜಿಲ್ಲಾ ನ್ಯಾಯಾಲಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಾರುಗೋಪ್ಪ ಗ್ರಾಮದಲ್ಲಿ 2021ರ ಜನವರಿಯಲ್ಲಿ ಆಸ್ತಿ ವಿಚಾರಕ್ಕೆ ಆರು ವರ್ಷದ ಮಗುವನ್ನು ಕ್ರೂರವಾಗಿ ಹತ್ಯೆ ಮಾಡಿದ ದೊಡ್ಡಪ್ಪನಿಗೆ ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಧೀಶರಾದ ಮಂಜುನಾಥ ನಾಯಕ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 75 ರೂ. ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತದಲ್ಲಿ 25 ಸಾವಿರವನ್ನು ಮಗುವಿನ ತಂದೆಗೆ ನೀಡುವಂತೆ ಸೂಚಿಸಲಾಗಿದೆ.
ಆರೋಪಿ ಈರಪ್ಪ ಸಂಕನ್ನವರ, ತನ್ನ ತಮ್ಮ ವಿರೇಶ್ ಜೊತೆಗಿನ ಆಸ್ತಿ ಗಲಾಟೆಯಿಂದ ಸಿಟ್ಟುಗೊಂಡು, ಆಟವಾಡುತ್ತಿದ್ದ ಆರು ವರ್ಷದ ಸಿದ್ಧಾರ್ಥ್ ವಿರೇಶ್ ಸಂಕನ್ನವರನನ್ನು ಕುಡಗೋಲಿನಿಂದ 5 ರಿಂದ 6 ಬಾರಿ ಕೊಚ್ಚಿ ಹತ್ಯೆ ಮಾಡಿದ್ದನು.
ಹತ್ಯೆಯ ನಂತರ, ಮಗು ಸಿದ್ಧಾರ್ಥನ ಸಹೋದರಿ ಅಂಕಿತಾಳ ಮೇಲೂ ಪ್ರಾಣಾಪಾಯ ಯತ್ನ ನಡೆದಿತ್ತು. ಸಾರ್ವಜನಿಕರ ನೆರವಿನಿಂದ ತಾಯಿ ಮಗಳ ಪ್ರಾಣ ಉಳಿಸಿದ್ದರು.
ಪ್ರಕರಣದಲ್ಲಿ ಒಟ್ಟು 35 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಾಗಿದ್ದು, ಅದರಲ್ಲೂ ಮೂವರು ಮಕ್ಕಳ ಪ್ರತ್ಯೇಕ ಸಾಕ್ಷಿ ಪ್ರಮುಖ ಪಾತ್ರವಹಿಸಿದೆ. ನ್ಯಾಯಾಲಯದ ಮುಂದೆ ಯಾವುದೇ ಭಯವಿಲ್ಲದೆ ನೈಜ ಘಟನೆ ವಿವರಿಸಿದ ಮಕ್ಕಳ ಹೇಳಿಕೆ ಪ್ರಕರಣದ ತೀರ್ಪಿಗೆ ಬಲ ನೀಡಿತು.
ಆರೋಪಿ ಪರ ವಕೀಲರು, “ಕೊಲೆ ನಡೆದ ದಿನ ಶಾಲೆಗೆ ಹೋಗಿದ್ದೀರಾ?” ಎಂದು ಮಕ್ಕಳಿಗೆ ಕ್ರಾಸ್ ಪರೀಕ್ಷೆ ನಡೆಸಿದರೂ, ಮಕ್ಕಳು ಸ್ಪಷ್ಟವಾಗಿ ಸತ್ಯವನ್ನೇ ನುಡಿದರು. ಅಂದಿನ ಮುರಗೋಡ್ ಠಾಣೆ ಸಿಪಿಐ ಮಂಜುನಾಥ ಅವರು ಚಾರ್ಜ್ಶೀಟ್ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ನಾರಾಯಣ ಆರಿ ಸಮರ್ಥವಾಗಿ ವಾದ ಮಂಡಿಸಿ ಗಲ್ಲು ಶಿಕ್ಷೆಗೆ ಮನವಿ ಸಲ್ಲಿಸಿದ್ದರು.



