*ಗೃಹ ಲಕ್ಷ್ಮೀ ಯೋಜನೆಗೆ ಮೂರು ವರ್ಷ: ಇಂದು ಸಂಭ್ರಮಿಸುವ ದಿನವಲ್ಲ, ಮಹಿಳೆಯರಿಗೆ ಲೆಕ್ಕ ಕೊಡುವ ದಿನ: ಆರ್. ಅಶೋಕ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಗೃಹ ಲಕ್ಷ್ಮೀ ಯೋಜನೆಗೆ ಮೂರು ವರ್ಷ ತುಂಬಿರುವ ಕಾರಣ ರಾಜ್ಯ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ ಯಾವ ಪುರುಷಾರ್ಥಕ್ಕಾಗಿ ಈ ಸಂಭ್ರಮ, ಸಿಎಂ ಡಿಕೆ ಶಿವಕುಮಾರ್ ಅವರೇ? ಎಂದು ವಿಪಕ್ಷ ನಾಯಕ ಆರ್.ಅಶೋಕ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರ ಹಾಕಿರುವ ಅವರು, ಮೂರು ವರ್ಷಗಳ ಹಿಂದೆ ನಿಮ್ಮ ಕರ್ನಾಟಕ ಕಾಂಗ್ರೆಸ್ ಪಕ್ಷ ರಾಜ್ಯದ ಸ್ವಾಭಿಮಾನಿ ಮಹಿಳೆಯರಿಗೆ ಕೊಟ್ಟ ಮಾತೇನು?
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವೇದಿಕೆ ಏರಿ ಕರ್ನಾಟಕದ ಪ್ರತಿ ಮನೆಯ ಯಜಮಾನಿಗೆ “ಕಟಾ ಕಟ್… ಕಟಾ ಕಟ್…” ಎಂದು ಪ್ರತಿ ತಿಂಗಳು ₹2,000 ಖಾತೆಗೆ ತಲುಪುತ್ತದೆ ಎಂದು ಬೊಗಳೆ ಬಿಟ್ಟಿದ್ದರು. ಇಂದು ಗೃಹಲಕ್ಷ್ಮಿ ಯೋಜನೆಯ 3 ವರ್ಷಗಳ ‘ಸಂಭ್ರಮ’ ಆಚರಿಸುತ್ತಿರುವ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ನನ್ನ ನೇರ ಸವಾಲು:
ನಿಮಗೆ ಕನಿಷ್ಠ ನಾಚಿಕೆ, ಮಾನ-ಮರ್ಯಾದೆ ಇದ್ದರೆ, ಮೊದಲು ಮಾತು ಕೊಟ್ಟಂತೆ ಮಹಿಳೆಯರ ಬಾಕಿ ಹಣ ಕೊಡಿ. ಆಮೇಲೆ ಜಾಹೀರಾತು ಕೊಟ್ಟು ಸಂಭ್ರಮಿಸಿ!
ಇಷ್ಟಕ್ಕೂ ಗೃಹಲಕ್ಷ್ಮಿಯ ಹೆಸರಿನಲ್ಲಿ ನಿಮ್ಮ ಸಾಧನೆಯಾದರೂ ಏನು?
CAG ಬಿಚ್ಚಿಟ್ಟ ₹225 ಕೋಟಿ ಅಕ್ರಮ: ಮಹಾಲೇಖಪಾಲರ ಪರಿಶೀಲನೆಯಲ್ಲಿ ₹225 ಕೋಟಿಗೂ ಹೆಚ್ಚು ಭಾರಿ ಲೂಟಿ ಪತ್ತೆಯಾಗಿದೆ.
2.88 ಲಕ್ಷ ಮೃತ ಫಲಾನುಭವಿಗಳು: ಸತ್ತವರ ಹೆಸರಲ್ಲಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯಲಾಗಿದೆ.
ಸರ್ಕಾರವೇ ಒಪ್ಪಿಕೊಂಡ ₹115 ಕೋಟಿ ಹಗರಣ: ಸತ್ತವರ ಖಾತೆಗೆ ₹115 ಕೋಟಿ ಜಮೆಯಾಗಿದೆ ಎಂದು ನಿಮ್ಮ ಸರ್ಕಾರವೇ ಒಪ್ಪಿಕೊಂಡು ಉಗುಳು ನುಂಗಿದೆ!
ಖಾತೆ ಸಂಖ್ಯೆಯೇ ಇಲ್ಲದೆ ₹46.52 ಕೋಟಿ ಪಾವತಿ: ಬ್ಯಾಂಕ್ ಖಾತೆ ಸಂಖ್ಯೆಯನ್ನೇ ನಮೂದಿಸದೆ 23,262 ಪಾವತಿಗಳ ಹೆಸರಿನಲ್ಲಿ ₹46.52 ಕೋಟಿ ಹಣ ಯಾರ ಜೇಬಿಗೆ ಹೋಯಿತು?
10 ಲಕ್ಷಕ್ಕೂ ಹೆಚ್ಚು ಬೋಗಸ್ ಖಾತೆಗಳು: ಒಂದೇ ಖಾತೆಗೆ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಲಿಂಕ್ ಮಾಡಿ ಅಕ್ರಮ ಎಸಗಲಾಗಿದೆ.
₹5,000 ಕೋಟಿ ಬಾಕಿ ಹಣ ಪಂಗನಾಮ: 2 ತಿಂಗಳ ಕಂತು, ಸುಮಾರು ₹5,000 ಕೋಟಿ ಹಣವನ್ನು ಮಹಿಳೆಯರಿಗೆ ನೀಡದೆ ವಂಚಿಸಿದ್ದೀರಿ. ಸದನದಲ್ಲಿ ಪ್ರಶ್ನಿಸಿದರೆ ಉತ್ತರ ನೀಡದೆ ಪಲಾಯನ ಮಾಡಿದ್ದೀರಿ. ಇದು ಗೃಹಲಕ್ಷ್ಮಿಯ ಯಶೋಗಾಥೆಯಲ್ಲ, “ಕಾಂಗ್ರೆಸ್ ಸರ್ಕಾರದ ಅವ್ಯವಹಾರ, ಅಕ್ರಮ ಮತ್ತು ಲೂಟಿಯ ಯಶೋಗಾಥೆ!”
ಹಣ ತಲುಪಬೇಕಾದ ಅರ್ಹ ಮಹಿಳೆಯರ ಖಾತೆ ಖಾಲಿ. ಆದರೆ ಸತ್ತವರ ಖಾತೆಗೆ ಕೋಟಿ ಕೋಟಿ ಜಮೆ!
ಖಾತೆ ಸಂಖ್ಯೆಯೇ ಇಲ್ಲದೆ ಕೋಟ್ಯಂತರ ರೂಪಾಯಿ ಪಾವತಿ. ಈಗ ತಮ್ಮ ಅಕ್ರಮ ಮುಚ್ಚಿಕೊಳ್ಳಲು “ಪರಿಷ್ಕರಣೆ” ನೆಪ ಹೇಳಿ ಮಹಿಳೆಯರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಿ ಕಣ್ಣೀರು ಹಾಕಿಸುತ್ತಿದ್ದೀರಿ.
ಸಿಎಂ ಡಿಕೆ ಶಿವಕುಮಾರ ಅವರೇ, ಪ್ರಚಾರಕ್ಕಾಗಿ ಪತ್ರಿಕಾ ಜಾಹೀರಾತಿಗೆ ತೆರಿಗೆದಾರರ ಸಾವಿರಾರು ಕೋಟಿ ಸುರಿಯುವ ನಿಮ್ಮ ಸರ್ಕಾರಕ್ಕೆ, ಮಹಿಳೆಯರ ಖಾತೆಗೆ ₹2,000 ಹಾಕಲು ಹಣವಿಲ್ಲವೇ?. ಪಿಂಕ್ ಲೈಟ್ ಹಾಕಿ, ಫ್ರಂಟ್ ಪೇಜ್ ಜಾಹೀರಾತು ನೀಡಿ ಸಂಭ್ರಮಿಸಿದ ತಕ್ಷಣ ನಿಮ್ಮ ಬೃಹತ್ ವೈಫಲ್ಯ ಮತ್ತು ಹಗರಣಗಳು ಮುಚ್ಚಿಹೋಗುವುದಿಲ್ಲ!
ಇದು ಸಂಭ್ರಮಿಸುವ ದಿನವಲ್ಲ, ರಾಜ್ಯದ ಮಹಿಳೆಯರಿಗೆ ಲೆಕ್ಕ ಕೊಡುವ ದಿನ. ಮೊದಲು ಈ ಕೆಲಸ ಮಾಡಿ ಆಮೇಲೆ ಸಂಭ್ರಮಿಸಿ.
ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ 2025 ಫೆಬ್ರವರಿ ಮತ್ತು ಮಾರ್ಚ್ ತಿಂಗಳ ₹5,000 ಕೋಟಿ ಹಣವನ್ನು ಪ್ರತಿಯೊಬ್ಬ ಮಹಿಳೆಯ ಖಾತೆಗೆ ತಕ್ಷಣ ಜಮೆ ಮಾಡಿ.
CAG ಎತ್ತಿರುವ ₹225 ಕೋಟಿ ಅಕ್ರಮದ ಬಗ್ಗೆ ಹಾಗೂ ಮೃತರ ಖಾತೆಗೆ ಹೋದ ಹಣದ ಬಗ್ಗೆ ತಕ್ಷಣ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಿ. ಗ್ಯಾರಂಟಿ ಹೆಸರಿನಲ್ಲಿ ಲೂಟಿ ಹೊಡೆದ ಕಮಿಷನ್ ಏಜೆಂಟ್ಗಳನ್ನು ಜೈಲಿಗಟ್ಟಿ.
ಮಾತು ಕೊಟ್ಟು ಮಹಿಳೆಯರಿಗೆ ಮೋಸ ಮಾಡುವುದು ಗ್ಯಾರಂಟಿ ಅಲ್ಲ, ಸಿಎಂ ಡಿಕೆಶಿ ಅವರೇ, ಅದು ಕರ್ನಾಟಕದ ಸ್ವಾಭಿಮಾನಿ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಮಾಡಿರುವ ನಂಬಿಕೆ ದ್ರೋಹ ಮತ್ತು ವಂಚನೆ.
ಗ್ಯಾರೆಂಟಿ ಹೆಸರಿನಲ್ಲಿ ಮಾಡಿರುವ ಈ ಲೂಟಿಯನ್ನ ಕರ್ನಾಟಕದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆರ್. ಅಶೋಕ ಆಕ್ರೋಶ ಹೊರ ಹಾಕಿದ್ದಾರೆ.




