Latest

ಕ್ರಿಡಾಪಟುಗಳಿಗೆ ಉತ್ತೇಜನ ಕೊರತೆ – ಮಲಪ್ರಭಾ ಜಾಧವ ಬೇಸರ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಗ್ರಾಮೀಣ ಮತ್ತು ಸಣ್ಣ ನಗರಗಳಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರಿಗೆ ಸೂಕ್ತ ಕಾಲದಲ್ಲಿ ಪ್ರೋತ್ಸಾಹ ದೊರಕದ ಕಾರಣ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಘ ಸಂಸ್ಥೆಗಳು ಸ್ಥಳೀಯ ಮಟ್ಟದಲ್ಲಿ ಕ್ರೀಡೆಸ್ಫರ್ಧೆಗಳನ್ನು ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅಂತರ್‌ರಾಷ್ಟ್ರೀಯ ಕ್ರಿಡಾಪಟು ಮಲಪ್ರಭಾ ಜಾಧವ ಅವರು  ಹೇಳಿದರು.
ರವಿವಾರ ಬೆಳಿಗ್ಗೆ ಬೆಳಗಾವಿಯ ಯುನಿಯನ್ ಜಿಮಖಾನಾ ಮೈದಾನದಲ್ಲಿ ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಝೇಶನ ವತಿಯಿಂದ ಆಯೋಜಿಸಲಾದ ಮೂರು ದಿನಗಳ ಜಿತೋ ಜೆಪಿಎಲ್ ಕ್ರೀಡಾ ಸ್ಫರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನೂ ಸಹ ಗ್ರಾಮೀಣ ಪ್ರದೇಶದಿಂದ ಬಂದಿದ್ದು, ನನಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅನೇಕರು ಸಹಾಯ ಮತ್ತು ಸಹಕಾರ ನೀಡಿದ್ದಾರೆ. ಬೆಳಗಾವಿಯಂತಹ ಪ್ರದೇಶದಲ್ಲಿ ಅನೇಕ ಉದಯೋನ್ನುಖ ಕ್ರೀಡಾಪಟುಗಳಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಉತ್ತೇಜನ ದೊರಕಿದಲ್ಲಿ ಅವರೂ ಸಹ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿಗೆ ಕೀರ್ತಿ ತರಬಹುದಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಕ್ರೀಡಾ ಸ್ಪರ್ಧೆಯ ಪ್ರಾಯೋಜಕ ಪ್ರದೀಪ ಹೊಸಮನಿ , ಹೇಮೇಂದ್ರ ಪೋರವಾಲ ಅವರು ಮಾತನಾಡಿದರು. ಉದ್ಯಮಿ ಗೋಪಾಲ ಜಿನಗೌಡ ಅವರು ಮಲಪ್ರಭಾ ಜಾಧವ ಅವರನ್ನು ಸನ್ಮಾನಿಸಿ ಗೌರವಿಸಿದರು. ಜಿತೋ ಸಂಸ್ಥೆಯ ಬೆಳಗಾವಿ ವಿಭಾಗದ ಅಧ್ಯಕ್ಷ ಸತೀಶ ಮೆಹತಾ ಅತಿಥಿಗಳನ್ನು ಸ್ವಾಗತಿಸಿದರು. ಕ್ರೀಡಾ ಸ್ಫರ್ಧೆಯ ಸಂಯೋಜಕ ನಿತಿನ ಪೋರವಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಜಿತೋ ಸಂಸ್ಥೆಯ ಉಪಾಧ್ಯಕ್ಷ ಮನೋಜ ಸಂಚೇತಿ, ಸದಸ್ಯರಾದ ಜಬರಚಂದ ಸಾಮಸುಖ,ಸುನಿಲ ಕಟಾರಿಯಾ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ವಿಕ್ರಮ ಜೈನ್ ವಂದಿಸಿದರು. ಅಭಿಜೀತ್ ಬೋಜನ್ನವರ ಕಾರ್ಯಕ್ರಮ ನಿರೂಪಿಸಿದರು. ಜಿತೋ ಜೆಪಿಎಲ್ ಕ್ರೀಡಾ ಸ್ಪರ್ಧೆಯಲ್ಲಿ ಕ್ರಿಕೆಟ್, ಕೇರಂ, ಟೆಬಲ್ ಟೆನಿಸ್, ಚೆಸ್ ಮತ್ತು ಬ್ಯಾಡಮಿಂಟನ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಸೇರ್ ಮಾಡಿ)

Home add -Advt

Related Articles

Back to top button