Karnataka News
*ಉರುಳಿ ಬಿದ್ದ ತೇರು: ಇಬ್ಬರು ಸಾವು, ಹಲವರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ತೇರು ಉರುಳಿಬಿದ್ದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಮದ್ದೂರಮ್ಮ ಜಾತ್ರೆಯಲ್ಲಿ ಸಂಭವಿಸಿದೆ.
ಮದ್ದೂರಮ್ಮ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಅತೀ ಎತ್ತರದ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಗಾಳಿ ಸಹಿತ ಮಳೆಯ ಕಾರಣದಿಂದಾಗಿ ತೇರು ಧರೆಗೆ ಉರುಳಿದೆ.
ಎರಡು ಕುರ್ಜುಗಳು ಧರೆಗೆ ಉರುಳಿಬಿದ್ದಿದ್ದು, ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ಈ ತೇರನ್ನು ಎಳೆಯಲಾಗುತ್ತಿತ್ತು. 150 ಕ್ಕೂ ಹೆಚ್ಚು ಅಡಿ ಎತ್ತರದ ಕುರ್ಜುಗಳು ಇದಾಗಿದ್ದು, ತೇರು ಎಳೆದು ತರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರ್ಜು ನಿಧಾನವಾಗಿ ಉರುಳಿದ್ದರಿಂದ ಅಪಾಯವನ್ನರಿತ ಭಕ್ತರು ಅವಘಡದಿಂದ ತಪ್ಪಿಸಿಕೊಂಡಿದ್ದಾರೆ.



