
ಪ್ರಗತಿವಾಹಿನಿ ಸುದ್ದಿ: ಮಳೆಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು ಜಲಪಾತಗಳ ವಿಕ್ಷಣೆಗೆ ತೆರಳುತ್ತಾರೆ. ಈ ವೇಳೆ ಅನೇಕ ಅವಘಡಗಳು ಸಂಭವಿಸುತ್ತೆ. ಜಲಪಾತ ವೀಕ್ಷಣೆ ವೇಳೆ ಮರ ಬಿದ್ದು ಇಬ್ಬರು ಪ್ರವಾಸಿಗರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಜಿಲ್ಲೆಯ ಚಕ್ರತದಲ್ಲಿರುವ ಜನಪ್ರಿಯ ಜಲಪಾತವಾದ ಟೈಗರ್ ಫಾಲ್ಸ್ ನಲ್ಲಿ ನಡೆದಿದೆ. ದೆಹಲಿಯ ಶಹದಾರ ಪ್ರದೇಶದ ನಿವಾಸಿ ಅಲ್ಕಾ ಆನಂದ್ ಮತ್ತು ಚಕ್ರತದ ಗೀತಾರಾಮ್ ಜೋಶಿ ಮೃತ ದುರ್ದೈವಿಗಳು.
ಮೃತರು ಸೇರಿದಂತೆ ಇತರ ಪ್ರವಾಸಿಗರು ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಸುಮಾರು 60 ಮೀಟರ್ ಎತ್ತರದಿಂದ ಜಲಪಾತದ ನೀರಿನ ಜೊತೆಗೆ ಮರ ಉರುಳಿ ಬಂದಿದ್ದು, ಅಲ್ಕಾ ಆನಂದ್ ಮತ್ತು ಗೀತಾರಾಮ್ ಜೋಶಿ ಅವರ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಮೂವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.