Latest

ಶಾಸಕ ರಘುಪತಿ ಭಟ್ ಗೆ ಜೀವ ಬೆದರಿಕೆ ಕರೆ

ಪ್ರಗತಿವಾಹಿನಿ ಸುದ್ದಿ; ಉಡುಪಿ: ಹೈಕೋರ್ಟ್ ತೀರ್ಪು ಬರುವವರೆಗೂ ಸಮವಸ್ತ್ರ ಕಡ್ಡಾಯ ಆದೇಶ ಹೊರಡಿಸಲಾಗಿದ್ದರೂ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ. ಈ ನಡುವೆ ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈ ಕುರಿತು ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆ.

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ರಾಜ್ಯ, ಹೊರರಾಜ್ಯಗಳಿಂದ ಮಾತ್ರವಲ್ಲ ವಿದೇಶಗಳಿಂದಲು ಜೀವ ಬೆದರಿಕೆ ಕರೆ ಬರುತ್ತಿವೆ. ಫೋನ್ ಹಾಗೂ ಇಂಟರ್ ನೆಟ್ ಕರೆ ಮೂಲಕ ಶಾಸಕರಿಗೆ ಬೆದರಿಕೆಯೊಡ್ಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಶಾಸಕರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಶಾಸಕರು, ಬಾಲ್ಯದಿಂದಲು ಇಂತಹ ಹಲವು ಬೆದರಿಕೆಗಳನ್ನು ನಾನು ನೋಡಿದ್ದೇನೆ. ಉಡುಪಿ, ಬೆಂಗಳೂರು ಭಾಗದ ಮುಸ್ಲೀಂ ಒಕ್ಕೂಟ, ಖಾಜಿಗಳು ನನಗೆ ಬೆಂಬಲ ನೀಡಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಕೆಲ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬರುತ್ತಿದೆ. ಹೈದರಾಬಾದ್, ವಿದೇಶಗಳಿಂದಲೂ ಫೋನ್ ಹಾಗೂ ಸಾಮಾಜಿಕ ತಾಣಗಳ ಮೂಲಕ ಬೆದರಿಕೆ ಕರೆ ಬರುತ್ತಿದೆ. ನನ್ನ ಬಳಿ ಯಾವುದೇ ಗನ್ ಮ್ಯಾನ್ ಇಲ್ಲ, ಮಗೆ ಸೆಕ್ಯೂರಿಟಿಯನ್ನು ಕೂಡ ನೇಮಕ ಮಾಡಿಕೊಂಡಿಲ್ಲ. ಇಂತಹ ಬೆದರಿಕೆಗಳಿಗೆ ಹೆದರುವ ಪ್ರಶ್ನೆ ಇಲ್ಲ. ಆದಾಗ್ಯೂ ಉಡುಪಿ ಎಸ್ ಪಿ ವಿಷ್ಣುವರ್ಧನ್ ಅವರು ಗನ್ ಮ್ಯಾನ್ ಕಳುಹಿಸಿಕೊಟ್ಟಿದ್ದಾರೆ. ಮುಂಜಾಗೃತಾ ದೃಷ್ಟಿಯಿಂದ ಭದ್ರತೆ ಒದಗಿಸುತ್ತಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಭದ್ರತಾ ಸಿಬ್ಬಂದಿ ನಿರಾಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ PU ಕಾಲೇಜುಗಳಿಗೆ ರಜೆ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button