Kannada NewsKarnataka NewsPolitics

*ಪಿಎಸ್ ಐ ಹಗರಣದ ಕಿಂಗ್ ಪಿನ್ ಮನೆಯಲ್ಲಿ ಬಿಜೆಪಿ ಸಂಸದರ ಊಟೋಪಚಾರ; ಮತ್ತೋರ್ವ ಆರೋಪಿಯೊಂದಿಗೆ ಮೆರವಣಿಗೆಯಲ್ಲಿ ಭಾಗಿ*

ಬಿಜೆಪಿ ನಾಯಕರ ನಡೆಗೆ ತೀವ್ರ ಆಕ್ರೋಶ


ಪ್ರಗತಿವಾಹಿನಿ ಸುದ್ದಿ: ಪಿಎಸ್ ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ನಿವಾಸದಲ್ಲಿ ಬಿಜೆಪಿ ಸಂಸದ, ಅಭ್ಯರ್ಥಿ ಉಮೇಶ್ ಜಾಧವ್ ಊಟೋಪಚಾರ ಮಾಡಿದ್ದು, ಬಳಿಕ ಇನ್ನೋರ್ವ ಆರೋಪಿಯೊಂದಿಗೆ ರಾಮನವಮಿ ಮೆರವಣಿಗೆಯಲ್ಲಿ ಪಾಲ್ಗೊಂಡು, ಫೋಟೋಗೆ ಪೋಸ್ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಾವಿರಾರು ಯುವ ಜನತೆಯ ಭವಿಷ್ಯವನ್ನೇ ಹಾಳು ಮಾಡಿರುವ ಆರೋಪಿಗಳ ಜೊತೆ ಬಿಜೆಪಿ ನಾಯಕರು ನಡೆದುಕೊಳ್ಳುತ್ತಿರುವ ರೀತಿಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದೆ.

ಕಲಬುರ್ಗಿ ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಂಸದ ಉಮೇಶ್ ಜಾಧವ್ ನಿನ್ನೆ ಪಿ ಎಸ್ ಐ ಹಗರಣದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಮನೆಗೆ ಭೇಟಿ ನೀಡಿ ಮತಯಾಚಿಸಿದ್ದಾರೆ. ಇದೇ ವೇಳೆ ಅವರ ಮನೆಯಲ್ಲಿ ಊಟೋಪಚಾರ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇಂದು ಮತ್ತೊಂದು ಫೋಟೋ ವೈರಲ್ ಆಗಿದೆ. ರಾಮನವಮಿ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಉಮೇಶ್ ಜಾಧವ್ ಪಿಎಸ್ ಐ ಹಗರಣದ ಇನ್ನೋರ್ವ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಜೊತೆ ಫೋಟೋಗೆ ಪೋಸ್ ನೀಡಿದ್ದು, ಇದನ್ನು ಉಮೇಶ್ ಜಾದವ್ ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.

ಪಿ ಎಸ್ ಐ ನೇಮಕಾತಿ ಹಗರಣ, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ನಾಯಕರೇ ಭಾಗಿಯಾಗಿದ್ದಾರೆ. ಅಂದಿನ ಬಿಜೆಪಿ ಸರ್ಕಾರದ ಕೈವಾಡವೇ ಇದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿಗಳು ಬೇಕೆ? ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button