ನಿರುದ್ಯೋಗ ಸಮಸ್ಯೆ ನಿವಾರಣೆ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವಿಲ್ಲ: ರಾಹುಲ್ ಕಿಡಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಸುದೀರ್ಘ ಬಜೆಟ್ ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಜೆಟ್ ನಲ್ಲಿ ಏನೂ ಇರಲಿಲ್ಲ, ಇದೊಂದು ಟೊಳ್ಳು ಆಯವ್ಯಯವಾಗಿದೆ ಎಂದು ಕಿಡಿಕಾರಿದ್ದಾರೆ.
ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಅದು ನಿರುದ್ಯೋಗ. ಆದರೆ, ಯುವ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲು ಸಹಾಯವಾಗುವಂಥ ಯಾವುದೇ ಯೋಜನೆಗಳು ಬಜೆಟ್ ನಲ್ಲಿ ಕಂಡುಬಂದಿಲ್ಲ. ಇದೊಂದು ಸುದೀರ್ಘವಾದ ಟೊಳ್ಳು ಬಜೆಟ್ ಆಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ನಿರುದ್ಯೋಗ ನಿವಾರಣೆ ಬಗ್ಗೆ ಬರೀ ಹೇಳಿಕೆ ನೀಡುತ್ತಿದೆ ಹೊರತು ಸಮಸ್ಯೆ ನಿವಾರಣೆಗೆ ಏನನ್ನೂ ಮಾಡುತ್ತಿಲ್ಲ. ಬಜೆಟ್ ಮಂಡನೆಗೂ ಮೊದಲು ಉದ್ಯೋಗ ಸೃಷ್ಟಿಸಿಯ ಬಗ್ಗೆ ಭಾರೀ ಚರ್ಚೆ ನಡೆದಿತ್ತು. 2014ರಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದಿದ್ದ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ಪದವಿ ಗಳಿಸಿದವರು ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ ಆದರೆ ಉದ್ಯೋಗ ಸೃಷ್ಟಿ ಬಗ್ಗೆ ಯಾವೊಂದು ಯೋಜನೆ ಕೂಡ ಇಲ್ಲದಿರುವುದು ಸರಕಾರದ ಮನೋಧೋರಣೆಯನ್ನು ಸಾರುತ್ತಿದೆ. ಹೇಳಿದ ವಿಷಯವನ್ನೇ ಮತ್ತೆ ಮತ್ತೆ ಹೇಳುವ ಮೂಲಕ ಕಾಲಹರಣ ಮಾಡಿದ್ದಾರೆ ಎಂದು ಗುಡುಗಿದರು.



