Belagavi NewsBelgaum NewsKarnataka News

*ಬಾಲ್ಯವಿವಾಹ ತಡೆಯಲು ಕೈ ಜೋಡಿಸಿ: ಸ್ಪಂದನಾ ಸಂಸ್ಥೆಯ ಸಿಇಒ ವಿ.ಸುಶೀಲಾ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆ ಅಕ್ಷಯ ತೃತೀಯ ದಿನ ಹೆಚ್ಚಿನ ಸಂಖ್ಯೆಯಲ್ಲಿ‌ ವಿವಾಹಗಳು ನಡೆಯುತ್ತವೆ. ಈ ವೇಳೆ ಬಾಲ್ಯ ವಿವಾಹಗಳು ಆಗುವ ಸಾಧ್ಯತೆಯೂ ಹೆಚ್ಚಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಿ ಅಂತಹ ಮದುವೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಜೊತೆ ಕೈ ಜೋಡಿಸುವಂತೆ ಸ್ಪಂದನಾ ಸಂಸ್ಥೆಯ ಸಿಇಒ ವಿ.ಸುಶೀಲಾ ಕೋರಿದರು.

ಬೆಳಗಾವಿಯಲ್ಲಿ‌ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಅಕ್ಷಯ ತೃತೀಯ ದಿನ ಒಳ್ಳೆಯ ಮುಹೂರ್ತ ಇರುವ ಹಿನ್ನೆಲೆಯಲ್ಲಿ ಬಹಳಷ್ಟು ಕಡೆ ಸಾಮೂಹಿಕ ವಿವಾಹಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆ ಇದೆ. ಹಾಗಾಗಿ, ಅನೇಕ ಧರ್ಮಗುರುಗಳನ್ನು ಭೇಟಿಯಾಗಿ ನಾವು ಮನವಿ ಮಾಡಿಕೊಂಡಿದ್ದು, ಬಾಲ್ಯ ವಿವಾಹಗಳಿಗೆ ತಾವು ಪೌರೋಹಿತ್ಯ ವಹಿಸಬಾರದು. ಅಲ್ಲದೇ ನಾಳೆ ಒಂದೇ ಒಂದು ಬಾಲ್ಯ ವಿವಾಹ ಕೂಡ ನಡೆಯದಂತೆ ಎಲ್ಲರೂ ನಮ್ಮ ಜೊತೆ ಕೈ ಜೋಡಿಸುವಂತೆ ಕೇಳಿಕೊಂಡರು.

ಬೆಳಗಾವಿ ಮತ್ತು ಹುಕ್ಕೇರಿ ತಾಲ್ಲೂಕುಗಳನ್ನು ನಾವು ಗುರಿಯಾಗಿಸಿದ್ದೇವೆ. ಅಲ್ಲದೇ ಎಲ್ಲೆಲ್ಲಿ ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆ ಇದೆ ಎಂಬ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ಒದಗಿಸಿದ್ದೇವೆ. ಅದೇ ರೀತಿ ಮ್ಮ ಸಂಸ್ಥೆಯಿಂದ ಮೂರು ತಂಡಗಳನ್ನು ರಚಿಸಿಕೊಂಡಿದ್ದು, ಇವತ್ತು ಮತ್ತು ನಾಳೆ ಕಾರ್ಯಾಚರಣೆ ಮಾಡಲಿದ್ದೇವೆ ಎಂದು ವಿ.ಸುಶೀಲಾ ಹೇಳಿದರು.

ಬಾಲ್ಯ ವಿವಾಹ ಅಸಿಂಧು, ಈ ಕೃತ್ಯ ಎಸಗಿದರೆ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಶಿಕ್ಷಾರ್ಹ ಅಪರಾಧ.‌ ಫೋಕ್ಸೊ ಪ್ರಕರಣ ಕೂಡ ಅನ್ವಯವಾಗುತ್ತದೆ. ಇಷ್ಟೇಲ್ಲಾ ಬಿಗಿ ಕಾನೂನುಗಳು ಇದ್ದರೂ ಕೂಡ ಬಾಲ್ಯ ವಿವಾಹ ತಡೆಗಟ್ಟುವುದು ತುಂಬಾ ಕಷ್ಟದ ಕೆಲಸವಾಗಿದೆ.  ಮಕ್ಕಳಿಗೆ ಬಾಲ್ಯ ವಿವಾಹ ಮಾಡಿಕೊಳ್ಳುವುದು ತಪ್ಪು ಎನ್ನುವುದೇ ಗೊತ್ತಿಲ್ಲ. ಹಾಗಾಗಿ, ಇದು ಬಾಲ್ಯ ವಿವಾಹ ತಡೆಗಟ್ಟಲು ಬಹಳ ದೊಡ್ಡ ಸವಾಲಾಗಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಮನವಲಿಸುತ್ತಿದ್ದೇವೆ. ಅವಧಿಪೂರ್ವ ವಿವಾಹ ಆದರೆ ಏನೆಲ್ಲಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬ ಬಗ್ಗೆಯೂ ಮನವರಿಕೆ ಮಾಡುತ್ತಿದ್ದೇವೆ ಎಂದು ಪಿ.ಸುಶೀಲಾ ತಿಳಿಸಿದರು.

Home add -Advt

“ಬಾಲ್ಯ ವಿವಾಹ ಮುಕ್ತ ಭಾರತ” ಅಭಿಯಾನದಡಿ “ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್” ನೆಟವರ್ಕ್ ಕಟ್ಟಿಕೊಂಡು

ದೇಶಾಧ್ಯಂತ 416 ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಕೆಲಸ ಮಾಡಲಾಗುತ್ತಿದೆ. ಇದರ ಸಹಯೋಗದಲ್ಲಿ ನಮ್ಮ ಸ್ಪಂದನಾ ಸಂಸ್ಥೆ ರಾಜ್ಯದ ಬೆಳಗಾವಿ ಮತ್ತು ಕೊಪ್ಪಳದಲ್ಲಿ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ 2023-24ರಲ್ಲಿ 300ಕ್ಕೂ ಅಧಿಕ ಬಾಲ್ಯ ವಿವಾಹ ತಡೆಗಟ್ಟಿದ್ದೇವೆ. 15 ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿದ್ದೇವೆ. ಅಲ್ಲದೇ 10 ಸಾವಿರ ಜನರಿಗೆ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪ್ರತಿಜ್ಞೆ ಮಾಡಿಸಿದ್ದೇವೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಯೋಜಕ ಕರೆಪ್ಪ ಮಾದಿಗರ, ಸಮುದಾಯ ಸಂಘಟಕಿ ಶಿವಲೀಲಾ ಹಿರೇಮಠ ಇದ್ದರು.

Related Articles

Back to top button