
ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ದುರುಳರು ಹಸುವನ್ನು ಕಡಿದು ಮಾಂಸ ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಘೋರ ಘಟನೆ ನಡೆದಿದೆ.
ಗರ್ಭ ಧರಿಸಿದ್ದ ಹಸುವಿನ ಹೊಟ್ಟೆ ಬಗೆದಿರುವ ದುರುಳರು ಕರುವಿನ ಭ್ರೂಣವನ್ನು ಎಸೆದು, ಆಕಳಿನ ಮಾಂಸ ಸಾಗಾಟ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕುಕನೀರ್ ವೆಂಕಟಾಪುರ ಹೊಳೆಯ ದಂಡೆಯ ಬಳಿ ಈ ಘಟನೆ ನಡೆದಿದೆ.
ಗರ್ಭ ಧರಿಸಿದ್ದ ಹಸುವನ್ನು ಹತ್ಯೆ ಮಾಡಿ, ಮಾಸ ಸಾಗಿಸಲಾಗಿದೆ. ಹಸುವಿನ ಭ್ರೂಣವನ್ನು ಚೀಲದಲ್ಲಿ ಸುತ್ತಿ ಎಸೆದಿದ್ದಾರೆ. ನಾಯಿಯೊಂದು ಚೀಲವನ್ನು ಎಳೆದು ತಂದಿದ್ದಾಗಲೇ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ.