*ನೀರಿಗೆ ವಿಷ ಸೇರಿಸಿದ ಪ್ರಕರಣ: ಆರೋಪಿಗಳಿಗೆ ನಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಜನತಾ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಸ್ಲಿಂ ಸಮುದಾಯದ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಿಸಲು, ವಿದ್ಯಾರ್ಥಿಗಳು ಕುಡಿಯಲು ಬಳಸುವ ನೀರಿನ ಟ್ಯಾಂಕ್ಗೆ ವಿಷ ಬೆರೆಸಿದ ಪ್ರಕರಣದಲ್ಲಿ ಶ್ರೀರಾಮ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಸಾಗರ ಪಾಟೀಲ್ ಸೇರಿ ಮೂವರನ್ನು ಸವದತ್ತಿಯ ನ್ಯಾಯಾಲಯವು ಆಗಸ್ಟ್ 11 ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಆರೋಪಿಗಳಾಗಿರುವ ಸಾಗರ ಪಾಟೀಲ್, ಆತನ ಸಂಬಂಧಿ ನಾಗನಗೌಡ ಮತ್ತು ಕೃಷ್ಣ ಮಾದರ್ ನನ್ನು ಸವದತ್ತಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ದರಾಮ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 13 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಸುಲೇಮಾನ್ ಗೋರಿನಾಯಕ್ರನ್ನು ವರ್ಗಾವಣೆ ಮಾಡಿಸುವ ಕುತಂತ್ರ ಮಾಡಲಾಗಿತ್ತು. ಅದಕ್ಕಾಗಿ ಕುಡಿಯುವ ನೀರಿನಲ್ಲಿ ವಿಷ ಬೆರೆಸಿ ಆರೋಪಿಗಳು ಷಡ್ಯಂತ್ರ ರೂಪಿಸಿದ್ದರು. ಶ್ರೀರಾಮ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಾಗರ ಪಾಟೀಲ್ ಇಂಥದ್ದೊಂದು ಕುತಂತ್ರ ಹೂಡಿದ್ದರು ಎನ್ನುವ ಆರೋಪ ಕೇಳಿಬಂದಿದೆ.