
ಪ್ರಗತಿವಾಹಿನಿ ಸುದ್ದಿ, ಚೆನ್ನೈ: 15 ವರ್ಷದ ಹುಡುಗಿಯೊಬ್ಬಳು ಪ್ರೇಮ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ 19ರ ಹರೆಯದ ಯುವಕನೊಬ್ಬ ಹೈ ಟೆನ್ಷನ್ ವಿದ್ಯುತ್ ಟಾವರ್ ಏರಿ ಪ್ರಹಸನವನ್ನೇ ಮಾಡಿದ್ದಾನೆ.
ಚೆನ್ನೈನ ಕ್ರೋಂಪೇಟ್ ಭಾಗದ ರಾಧಾನಗರ ನಿವಾಸಿ ಕೃಷ್ಣ ಎಂಬಾತನೇ ಪ್ರಹಸನ ಸೃಷ್ಟಿಸಿದ ಭಗ್ನಪ್ರೇಮಿ. ಈತ ಕಟ್ಟಡಗಳ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ತನ್ನ ಗಲ್ಲಿಯಲ್ಲಿನ 15 ವರ್ಷದ ಬಾಲಕಿ ಜೊತೆ ಪ್ರೀತಿ ಮಾಡುತ್ತಿದ್ದ ಯುವಕ, ಆಕೆಗೆ ತನ್ನೊಂದಿಗೆ ವಿವಾಹವಾಗಲು ಪ್ರಸ್ತಾಪ ಮಂಡಿಸಿದ್ದಾನೆ. ಅದಕ್ಕೆ ಆಕೆ ನಿರಾಕರಿಸಿದ್ದಾಳೆ.
ಇದರಿಂದ ರೊಚ್ಚಿಗೆದ್ದ ಯುವಕ ಆಕೆಯನ್ನು ಬೆದರಿಸುವ ಉದ್ದೇಶದಿಂದ ನೇರವಾಗಿ ದುರ್ಗಾನಗರ ಪ್ರದೇಶಕ್ಕೆ ಬಂದು ತಂಬರಂ ಸೆನೆಟೋರಿಯಂ ಭಾಗದ ಹೈಟೆನ್ಷನ್ ಟಾವರ್ ಒಂದನ್ನು ಏರಿದ್ದಾನೆ. ವಿಷಯ ತಿಳಿಯುತ್ತಲೇ ಈ ಭಾಗದ ವಿದ್ಯುತ್ ಪ್ರಸರಣವನ್ನೇ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಯಿತಲ್ಲದೆ ಪ್ರಮುಖ ವಿದ್ಯುತ್ ಚಾಲಿತ ರೈಲುಗಳ ಸಂಚಾರ ಕೂಡ ವ್ಯತ್ಯಯಗೊಂಡಿತು.
ಸ್ಥಳಕ್ಕೆ ಅಗ್ನಿಶಾಮಕ ದಳದವರು, ಪೊಲೀಸರು ಧಾವಿಸಿದರು. ಪೊಲೀಸರು, ಕುಟುಂಬದವರು, ಮಿತ್ರರು ಎಷ್ಟೇ ಮನವೊಲಿಸಿದರೂ ಯುವಕ ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಕೊನೆಗೆ ಆತ ಪ್ರೀತಿಸುತ್ತಿದ್ದ ಬಾಲಕಿಯನ್ನೇ ಸ್ಥಳಕ್ಕೆ ಕರೆದೊಯ್ದು ಮದುವೆಯಾಗುವುದಾಗಿ ಒಪ್ಪಿಸುತ್ತಲೇ ಯುವಕ ಕೆಳಗಿಳಿದಿದ್ದಾನೆ.
ನರ್ಮದಾ ನದಿಗೆ ಉರುಳಿ ಬಿದ್ದ ಬಸ್; 13 ಪ್ರಯಾಣಿಕರ ದುರ್ಮರಣ