
ಪ್ರಗತಿವಾಹಿನಿ ಸುದ್ದಿ, ರಾಯಪುರ: ಯುವತಿಯರ ಗುಂಪೊಂದು ನಡುಬೀದಿಯಲ್ಲೇ ಯುವಕನ ಮೇಲೆ ಹಲ್ಲೆ ಮಾಡಿ ಆತನ ಅಂಗಿ ಹರಿದು ಅರೆಬೆತ್ತಲೆಯಾಗಿ ಓಡಿಸಿದ ಘಟನೆಯ ವಿಡಿಯೊವೊಂದು ವೈರಲ್ ಆಗಿದೆ.
ಛತ್ತೀಸ್ ಗಡದ ರಾಯಪುರದ ವಿವೇಕಾನಂದ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬಿಳಿಯ ಶರ್ಟ್, ಕಪ್ಪು ಪ್ಯಾಂಟ್ ಯುನಿಫಾರ್ಮ್ ಧರಿಸಿರುವ ಯುವತಿಯರು ಯುವಕನೊಬ್ಬನನ್ನು ಬೆಲ್ಟ್ ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಪದೇಪದೆ ಕಪಾಳಮೋಕ್ಷ ಮಾಡಿದ್ದಾರೆ. ಅಂಗಿ ಹರಿದು ಯುವಕನನ್ನು ಅರೆಬೆತ್ತಲೆಯಾಗಿ ಓಡಿಸಿದ್ದಾರೆ.
ಈ ದೃಶ್ಯವನ್ನು ಹಲವರು ಪಕ್ಕದಲ್ಲಿ ನಿಂತು ವೀಕ್ಷಿಸುತ್ತಿದ್ದು ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹಣಕಾಸಿನ ವಿಚಾರದಲ್ಲಿ ನಾರಿಯರ ಮುನಿಸು ಸ್ಫೋಟಗೊಂಡಿದೆ ಎನ್ನಲಾಗಿದ್ದು ಯುವತಿಯರು ಹಾಗೂ ಯುವಕ ಇಬ್ಬರೂ ಪರಸ್ಪರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.