
ಪ್ರಗತಿವಾಹಿನಿ ಸುದ್ದಿ; ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ತಂದೆ ನವಜೋತ್ ಸಿಂಗ್ ಸಿಧು ಪರ ಮಗಳು ರಬಿಯಾ ಬಿರುಸಿನ ಪ್ರಚಾರ ನಡೆಸಿದ್ದು, ತನ್ನ ತಂದೆ ಚುನಾವಣೆಯಲ್ಲಿ ಗೆಲುವು ಸಾಧಿಸುವವರೆಗೂ ವಿವಾಹವಾಗುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಚುನಾವಣೆಯಲ್ಲಿ ತಂದೆಯ ಗೆಲುವಿಗಾಗಿ ನಾನು ಶ್ರಮಿಸುತ್ತೇನೆ. ಕಾಂಗ್ರೆಸ್ ಸಿಎಂ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಬಡವರ ಪರವಾಗಿ ಇದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಅಂದಾಗ ಮಾತ್ರ ಅವರ ಖಾತೆಯಲ್ಲಿ 133 ಕೋಟಿಗೂ ಅಧಿಕ ಹಣ ಇರುವುದು ಗೊತ್ತಾಗುತ್ತದೆ ಎಂದಿದ್ದಾರೆ.
ಪ್ರಾಮಾಣಿಕ ವ್ಯಕ್ತಿಯನ್ನು ಹಲವುಬಾರಿ ಪಕ್ಷ ಒತ್ತಡಕ್ಕೆ ಒಳಗಾಗಿ ದೂರವಿಡುತ್ತದೆ. ಆದರೆ ಅದು ದೀರ್ಘ ಕಾಲ ನಡೆಯಲು ಸಾಧ್ಯವಿಲ್ಲ. ಕಳೆದ 14 ವರ್ಷಗಳಿಂದ ಪಂಜಾಬ್ ಗಾಗಿ ನನ್ನ ತಂದೆ ಕೆಲಸ ಮಾಡುತ್ತಿದ್ದಾರೆ. ನಮ್ಮ ತಂದೆಯನ್ನು ಇತರ ರಾಜಕೀಯ ಪಕ್ಷದ ನಾಯಕರೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಪಂಜಾಬ್ ಇಂದು ಕೆಟ್ಟ ಪರಿಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯವನ್ನು ಉಳಿಸುವ ಏಕೈಕ ವ್ಯಕ್ತಿಯೆಂದರೆ ತನ್ನ ತಂದೆ ನವಜೋತ್ ಸಿಂಗ್ ಸಿಧು ಎಂದು ಹೇಳಿದ್ದಾರೆ.
ನನ್ನ ತಂದೆ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಅವರು ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ ಎಂದಿರುವ ರಬಿಯಾ, ತಂದೆಗೆ ಪ್ರತಿಸ್ಪರ್ಧಿಯಾಗಿ ಅಮೃತಸರ ಕ್ಷೇತ್ರದಲ್ಲಿ ನಿಂತಿರುವ ಎಸ್ ಎ ಡಿ ನಾಯಕ ಬಿಕ್ರಮ್ ಮಜಿಥಿಯಾ ವಿರುದ್ಧವೂ ಪರೋಕ್ಷ ವಾಗ್ದಾಳಿ ನಡೆಸಿದ್ದು, ಒಂದೆಡೆ ಡ್ರಗ್ಸ್, ಮತ್ತೊಂದೆಡೆ ಅಭಿವೃದ್ಧಿ, ಉದ್ಯೋಗ, ಶಿಕ್ಷಣ ಈ ಎರಡು ಆಯ್ಕೆಗಳಿಗೆ ಜನರು ತಮಗೆ ಯಾವುದು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಹಿರೋಯಿನ್ ಮಾಡುತ್ತೇನೆಂದು ಯುವತಿ ಬೆನ್ನುಬಿದ್ದಿದ್ದ ಯುವಕ ಅರೆಸ್ಟ್