
ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಲಂಚ ಸ್ವೀಕರಿಸುತ್ತಿದ್ದಾಗ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ತಹಸಿಲ್ದಾರ್ ಸಂಗಮೇಶ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಜಮೀನು ರೂಪಾಂತರ ಪತ್ರ ಮಾಡಿಕೊಡಲು ತಹಸಿಲ್ದಾರ್ ಸಂಗಮೇಶ್, ದೊಡ್ಡಬನ್ನಪ್ಪ ಎಬುವವರಿಂದ 10 ಸಾವಿರ ರೂಪಾಯಿ ಲಂಚ ಕೇಳಿದ್ದರು. ಮುಂಗಡವಾಗಿ 5 ಸಾವಿರ ರೂಪಾಯಿ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನದೆಸಿದ್ದು, ಸಂಗಮೇಶ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಜಮೀನು ರೂಪಾಂತರ ಪತ್ರಕ್ಕಾಗಿ ದೊಡ್ಡಬನಪ್ಪ ತಹಸಿಲ್ದಾರ್ ಕಚೇರಿಗೆ ಹಲವು ದಿನಗಳಿಂದ ಅಲೆದಾಡುತ್ತಿದ್ದರು. ಆದರೆ ಲಂಚದ ಆಸೆಗಾಗಿ ತಹಸಿಲ್ದಾರ್ ಸಂಗಮೇಶ್ ದೊಡ್ಡಬನ್ನಪ್ಪ ಅವರ ಕೆಲಸ ಮುಂದೂಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ದೊಡ್ಡಬನ್ನಪ್ಪ ಎಸಿಬಿಗೆ ದೂರು ನೀಡಿದ್ದರು. ಇದೀಗ ಎಸಿಬಿ ವಿಶೇಷ ಕಾರ್ಯಾಚರಣೆ ಮೂಲಕ ತಹಸಿಲ್ದಾರ್ ಅವರನ್ನು ಬಲೆಗೆ ಕೆಡವಿದೆ.