ಭಾನುವಾರದಿಂದ ಭಾವೈಕ್ಯತೆ ಬಿಂಬಿಸುವ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆ
*ಏ. 22 ವೀರಭದ್ರೇಶ್ವರ ಕೊಂಡ ದಾಟುವುದು *ಏ. 29ರಂದು ಪಲ್ಲಕ್ಕಿ ಉತ್ಸವ
*ಪ್ರತಿ ನಿತ್ಯ ಪ್ರವಚನ, ಸಂಗೀತ, ಉಪನ್ಯಾಸ
ಪ್ರಗತಿವಾಹಿನಿ ಸುದ್ದಿ, ಗೋಕಾಕ:
ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಗೋಕಾಕ ತಾಲ್ಲೂಕಿನ ಸಾವಳಗಿಯ ಸಿದ್ಧ ಸಂಸ್ಥಾನಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಇದೇ ಏ. 21ರಿಂದ ಏ. 29ರ ವರೆಗೆ ಶೂನ್ಯ ಸಿಂಹಾಸನಾಧೀಶ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯಲ್ಲಿ ಸಂಭ್ರಮದಿಂದ ಜಾತ್ರೆ ಜರುಗಲಿದೆ.
ಜಾತ್ರೆಯ ನಿಮಿತ್ತವಾಗಿ ಪುರಾಣ, ಸಂಗೀತ, ಕಲೆ, ಸಾಹಿತ್ಯ, ಸಾಂಸ್ಕøತಿಕ, ಕೃಷಿ, ಜಾನುವಾರುಗಳ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ.
ಭಾವೈಕ್ಯತೆಯನ್ನ ಬಿಂಬಿಸುವ ಪೀಠ: ದೈವಾಂಶ ಪುರುಷರು ಆಗಿರುವ ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರರು ಕ್ರಿ.ಶ. 1645ರಿಂದ ಕ್ರಿ.ಶ. 1748ರ ಅವಧಿಯಲ್ಲಿ ಹಲವಾರು ಪವಾಡುಗಳ ಮೂಲಕ ಭಕ್ತರ ಹೃದಯದಲ್ಲಿ ನೆಲೆಸಿರುವರು. ಕಲಬುರ್ಗಿಯ ಹಿರೇಸಾವಳಗಿ ಬಳಿಯ ಕೊಳ್ಳೂರು ಗ್ರಾಮದಲ್ಲಿ ಪಾವನ ಜನನವಾಗಿ ತಮ್ಮ ದೈವತ್ವ ಸಾಕ್ಷಾತ್ಕಾರದ ಮೂಲಕ ಗೋಕಾಕ ತಾಲ್ಲೂಕಿನ ಸಾವಳಗಿಯಲ್ಲಿ ನೆಲೆಸಿದರು. ಇವರ ತಪಸ್ಸಿನ ಪ್ರಭಾವವು ಕಲಬುರ್ಗಿಯ ಬಾದಷಹ ಸುಲ್ತಾನ್ ರೋಜ್ ಬಹದ್ದೂರನ ಗುರು ಬಂದೇನವಾಜ್ ವಲಿಯವರ ಮೇಲೆ ಬೀರಿತ್ತು. ಮುಸಲ್ಮಾನ್ ಗುರು ಖಾಜಾ ಬಂದೇ ನವಾಜ್ರು ವೀರಶೈವ ಗುರು ಶಿವಲಿಂಗೇಶ್ವರರ ಸಖ್ಯವನ್ನು ಬೆಳೆಸಿರುವ ಪ್ರತೀಕವಾಗಿ ಸಾವಳಗಿಯ ಶ್ರೀಪೀಠವು ಇಂದಿಗೂ ಭಾವೈಕ್ಯತೆಯನ್ನು ಬಿಂಬಿಸುವ ಜಾಗೃತ ಸ್ಥಳವಾಗಿದೆ. ಪೀಠದಲ್ಲಿ ಕಮಾನುಗಳು, ಗುಮ್ಮಟ, ಮಿನಾರುಗಳು ಮುಸ್ಲಿಂ ಸಂಸ್ಕøತಿಯನ್ನು ಬಿಂಬಿಸುತ್ತಿದ್ದು, ಇಲ್ಲಿ ಬರುವ ಭಕ್ತರಿಗೆ ಮಠ ಮತ್ತು ಮಸೀದಿಯ ಎರಡೂ ಒಂದೆಡೆ ಕಾಣುವಂತಿದೆ. ಹಿಂದೂ-ಮುಸ್ಲಿಂ ವಾಸ್ತುಶಿಲ್ಪವನ್ನು ಹೊಂದಿರುವ ಸಾವಳಗಿಯ ಶ್ರೀಪೀಠವು ಭಾವೈಕ್ಯತೆಯ ಪ್ರತೀಕವಾಗಿದೆ. ಶ್ರೀಪೀಠವು ಉತ್ಸವಗಳಲ್ಲಿ ಸನ್ನಿಧಿಯವರು ಮುಸ್ಲಿಂ ಪದ್ಧತಿಯಂತೆ ಹಸಿರು ಬಣ್ಣದ ಪೇಟಾ, ಶೈಲಿ, ಶಮನ ಮುಂತಾದ ರಾಜ ಪೋಷಾಕುಗಳನ್ನು ಧರಿಸುತ್ತಾರೆ. ಭಕ್ತರು ‘ದೀನ್ ಹರಹರಾ’ ಎಂಬ ಧರ್ಮ ಸಮನ್ವಯವನ್ನು ಸಾರುವ ಉದ್ಘೋಷ ಮಾಡುತ್ತಾರೆ. ಹಿಂದೂ, ಮುಸ್ಲಿಂ ಮನೆತನಗಳು ಮಠದ ಸೇವೆ ಸಲ್ಲಿಸುತ್ತಾ ಬಂದಿವೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳುನಾಡು, ಕಾಶ್ಮೀರ ಸೇರಿದಂತೆ ದೇಶಾದ್ಯಂತ 360ಕ್ಕೂ ಅಧಿಕ ಜಗದ್ಗುರು ಶಿವಲಿಂಗೇಶ್ವರರ ಮಠಗಳಿವೆ. 1100ಕ್ಕೂ ಅಧಿಕ ಗದ್ಗುಗೆಗಳಿವೆ. ಗೋಕಾಕ ತಾಲ್ಲೂಕಿನ ಸಾವಳಗಿಯಲ್ಲಿ ಜಗದ್ಗುರು ಶಿವಲಿಂಗೇಶ್ವರರು ಜೀವಂತ ಸಮಾಧಿ ಹೊಂದಿರುವುದರಿಂದ ಅದಕ್ಕೆ ಹೆಚ್ಚಿನ ಮಹತ್ವ ಬಂದಿದ್ದು, ಅತ್ಯಂತ ಜಾಗೃತ ಸ್ಥಳವೆನಿಸಿದೆ. ಶಿವಲಿಂಗೇಶ್ವರರ ಪರಮ ಭಕ್ತೆ ಶರಣೆ ಮರುಳಮ್ಮ ತಾಯಿಯ ಜೀವಂತ ಸಮಾಧಿಯು ಸಹ ಇಲ್ಲಿಯೇ ಇರುವುದು. ಮಹಾಯೋಗಿ ಮತ್ತು ಮಹಾಶರಣೆ ಇಬ್ಬರ ಸಜೀವ ಸಮಾಧಿಗಳು ಒಂದೆಡೆ ಇರುವುದು ಈ ಕ್ಷೇತ್ರದ ಇನ್ನೊಂದು ವೈಶಿಷ್ಟ್ಯತೆಯಾಗಿದೆ.
ಸದ್ಯ ಸಾವಳಗಿಯಲ್ಲಿಯ ಜಗದ್ಗುರು ಶಿವಲಿಂಗೇಶ್ವರರ ಮೂಲ ಮಠದಲ್ಲಿ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು 15ನೇ ಪೀಠಾಧಿಪತಿಗಳಾಗಿ ಲಕ್ಷಾಂತರ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕಮರವಾಡಿಯಲ್ಲಿ ಪುಣ್ಯಜನನ, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಸಂಸ್ಕøತ ವ್ಯಾಸಾಂಗವನ್ನು ಹೊಂದಿದ್ದಾರೆ. ಶ್ರೀಗಳು ಶ್ರೇಷ್ಠ ವಾಗ್ಮಿಗಳು, ಶ್ರೇಷ್ಠ ವಿಚಾರವಾದಿಗಳು, ಕಟ್ಟಾ ಶಿವಯೋಗಿಗಳು. ಶಿಕ್ಷಣ, ಕೃಷಿ, ಸಾಹಿತ್ಯ, ಸಂಗೀತ ಪ್ರೇಮಿಗಳಾಗಿದ್ದು, ಸ್ವತ: ಸನ್ನಿಧಿಯವರು ಸುಮಧುರ ಗಾಯಕರಾಗಿರುವರು. ಶ್ರೀಮಠದಲ್ಲಿ ಇಂದಿಗೂ ದೇಶಿ ಸಂಸ್ಕøತಿಯನ್ನು ಉಳಿಸಿಕೊಂಡು ಬಂದಿರುವುದು ಇಲ್ಲಿಯ ವಿಶೇಷವಾಗಿದೆ.

ಪ್ರತಿ ವರ್ಷ ಜರಗುವ ಜಾತ್ರೆ, ದಸರಾ ಉತ್ಸವ, ಕಾರ್ತಿಕೋತ್ಸವ, ಶಿವರಾತ್ರಿ ಮತ್ತು ಪ್ರತಿ ಅಮವಾಸ್ಯೆಗೆ ವಿಶೇಷ ಕಾರ್ಯಕ್ರಮಗಳು ಮಠದಲ್ಲಿ ಭಕ್ತಿಭಾವದಲ್ಲಿ ನಡೆದುಕೊಂಡು ಬಂದಿದ್ದು, ದೇಶದ ವಿವಿಧೆಡೆಯಿಂದ ಭಕ್ತರು ಕಾರ್ಯಕ್ರಮಗಳಿಗೆ ಆಗಮಿಸುತ್ತಿರುವುದು ಸಾವಳಗಿ ಶ್ರೀಮಠದ ವಿಶೇಷವಾಗಿದೆ.
ಜಾತ್ರೆ ಕಾರ್ಯಕ್ರಮಗಳು:
ಜಾತ್ರೆಯು ಏ. 21ರಿಂದ ಏ. 29ರ ವರೆಗೆ ಜರುಗುವುದು.
ಏ. 21ಕ್ಕೆ ಶಿವಲಿಂಗೇಶ್ವರ ಮೂರ್ತಿಗೆ ಪುಷ್ಪಾಂದೋಲನ, ಪಲ್ಲಕ್ಕಿ ಕಟ್ಟೆ ಮುಹುರ್ತ ರಾತ್ರಿ ಗೀಗೀಪದ, ಮದಾಲಸಿ, ಭಕ್ತಿಗೀತೆಗಳು. ಏ. 22ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ವರೆಗೆ ವೀರಭದ್ರೇಶ್ವರ ದೇವರ ಕೊಂಡವನ್ನು ದಾಟುವುದು.
ಏ. 22ರಂದು ರಾತ್ರಿ 8ಕ್ಕೆ ಪ್ರವಚನ, ಸಂಗೀತ, ಸಾಹಿತ್ಯ, ಸಾಂಸ್ಕøತಿಕ ಸೌರಭ ಕಾರ್ಯಕ್ರಮಗಳ ಉದ್ಘಾಟನೆ, ಪ್ರತಿ ದಿನ ಸಂಜೆ 7.30ಕ್ಕೆ ವಿವಿಧ ವಿಷಯಗಳ ಕುರಿತು ಉಪನ್ಯಾಸ ಇರುವುದು. ಏ. 29ರಂದು ಸಂಜೆ 4.30ಕ್ಕೆ ಅಡ್ಡಪಲ್ಲಕ್ಕಿ ಮಹೋತ್ಸವ ಇರುವುದು. ರಾತ್ರಿ 8ಕ್ಕೆ ಜಾತ್ರೆಯ ಸಮಾರೋಪ ಸಮಾರಂಭ ಜರುಗುವುದು ಎಂದು ಸಂಚಾಲಕ ಬಾಲಶೇಖರ ಬಂದಿ ತಿಳಿಸಿದ್ದಾರೆ.
(ಪ್ರಗತಿವಾಹಿನಿ ಸುದ್ದಿ, ಲೇಖನಗಳನ್ನು ಎಲ್ಲಾ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)