
ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಹಲವು ವರ್ಷಗಳಿಂದ ನೀರಾವರಿಯಿಂದ ವಂಚಿತಗೊಂಡಿದ್ದ ಕೌಜಲಗಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿ ಮಾಡಿದ ಶ್ರೇಯಸ್ಸು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಶುಕ್ರವಾರ ಸಂಜೆ ತಾಲೂಕಿನ ಕೌಜಲಗಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಮಂಜೂರು ಸಿಕ್ಕ ಹಿನ್ನೆಲೆಯಲ್ಲಿ ಕೃತಜ್ಞತಾ ಸಲ್ಲಿಸುವ ಸಭೆಯಲ್ಲಿ ಮಾತನಾಡಿದ ಅವರು, ಕಲ್ಮಡ್ಡಿ ಏತ ನೀರಾವರಿ ಅನುಷ್ಠಾನದ ಹಿಂದೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.
ಸಂಪೂರ್ಣವಾಗಿ ನೀರಾವರಿಯಿಂದ ವಂಚಿತಗೊಂಡಿದ್ದ ಕೌಜಲಗಿ ಭಾಗದ ರೈತ ಸಮುದಾಯಕ್ಕೆ ಘಟಪ್ರಭಾ ಬಲದಂಡೆ ಕಾಲುವೆ, ರಾಮೇಶ್ವರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡಿದ ನಂತರ ಈಗ ರೈತರ ಬಹುವರ್ಷಗಳ ಬೇಡಿಕೆಯಾಗಿದ್ದ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಮಂಜೂರಾತಿಗಾಗಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿ ೧೯೦ ಕೋಟಿ ರೂ.ಗಳ ಬೃಹತ್ ಕಾಮಗಾರಿಗೆ ಇಂದಿನ ಬಜೆಟ್ನಲ್ಲಿ ಅನುಮೋದನೆ ಮಾಡಿಸಿದ್ದರ ಹಿಂದೆ ಬಾಲಚಂದ್ರ ಜಾರಕಿಹೊಳಿ ಅವರ ಅಗಾಧ ಪರಿಶ್ರಮವಿದೆ. ಈ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು, ಕೌಜಲಗಿ ಹಾಗೂ ಸುತ್ತಮುತ್ತಲಿನ ರೈತರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ಎಂತಹ ಕಷ್ಟ ಕಾಲದಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ರಾಜ್ಯದಲ್ಲಿಯೇ ಏಕೈಕ ಶಾಸಕರು. ಇಂತಹವರನ್ನು ಪಡೆದಿರುವುದು ನಮ್ಮ ಕ್ಷೇತ್ರದ ಪುಣ್ಯ ಮತ್ತು ಹೆಮ್ಮೆ ಎಂದು ಸಣ್ಣಕ್ಕಿ ಶ್ಲಾಘಿಸಿದರು.
ಕೆಲವರಿಗೆ ಕಲ್ಮಡ್ಡಿ ಎಲ್ಲಿದೆ ಎಂಬುದೇ ಗೊತ್ತಿಲ್ಲ : ಪ್ರಭಾಶುಗರ ನಿರ್ದೇಶಕ ಮಹಾದೇವಪ್ಪ ಭೋವಿ ಮಾತನಾಡಿ, ಫಲವತ್ತಾದ ಭೂಮಿಯಿಂದ ಕೂಡಿರುವ ಕಲ್ಮಡ್ಡಿ ಏತ ನೀರಾವರಿ ಯೋಜನೆಗಾಗಿ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದರು. ಅದರ ಫಲವಾಗಿಯೇ ಕಲ್ಮಡ್ಡಿ ಯೋಜನೆಯನ್ನು ರೈತರಿಗೆ ಅರ್ಪಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ರೈತರ ಪರವಾಗಿ ಅಭಿನಂದಿಸಿದರು. ಕೌಜಲಗಿ ಭಾಗದ ಶ್ರೇಯೋಭಿವೃದ್ಧಿಯಲ್ಲಿ ಶಾಸಕರ ಕೊಡುಗೆ ಅಪಾರವಾಗಿದೆ. ಶಾಸಕರಿಂದಾಗಿಯೇ ಕೌಜಲಗಿ ಭಾಗ ಶೇ. ೧೦೦ ರಷ್ಟು ನೀರಾವರಿ ಪ್ರದೇಶವಾಗಿ ಮುಂದಿನ ದಿನಗಳಲ್ಲಿ ಸಂಪದ್ಭರಿತ ಪ್ರದೇಶವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.
ಮಾದರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಪರುಶೆಟ್ಟಿ, ತಾಪಂ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಗ್ರಾಪಂ ಅಧ್ಯಕ್ಷ ನೀಲಪ್ಪ ಕೇವಟಿ, ಮಾಜಿ ಗ್ರಾಪಂ ಅಧ್ಯಕ್ಷರಾದ ಸಿದ್ದಪ್ಪ ಹಳ್ಳೂರ, ರಾಯಪ್ಪ ಬಳೋಲದಾರ, ಪಿಕೆಪಿಎಸ್ ಮಾಜಿ ಅಧ್ಯಕ್ಷರಾದ ಅಡಿವೆಪ್ಪ ದಳವಾಯಿ, ಮಹೇಶ ಪಟ್ಟಣಶೆಟ್ಟಿ, ಅರ್ಬನ್ ಬ್ಯಾಂಕ್ ಮಾಜಿ ವ್ಯವಸ್ಥಾಪಕ ಬಸವರಾಜ ಬಳಿಗಾರ, ಸಿದ್ದಪ್ಪ ಹುಂಡರದ, ಡಿ.ಎಸ್. ನದಾಫ, ಜಕೀರ ಜಮಾದಾರ, ನಾಗಪ್ಪ ಡೊಣಿ, ಮಹಾದೇವ ಕುರಗುಂದ, ರಾಮಪ್ಪ ಈಟಿ, ರಮಜಾನ್ ಪೋದಿ, ಮುಂತಾದವರು ಉಪಸ್ಥಿತರಿದ್ದರು.
ಕಲ್ಮಡ್ಡಿ ಏತ ನೀರಾವರಿ ಯೋಜನೆಯ ರೂವಾರಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸಮಸ್ತ ರೈತ ಬಾಂಧವರ ಪರವಾಗಿ ಸಭೆಯಲ್ಲಿ ಅಭಿನಂದಿಸಲಾಯಿತು.