ಪ್ರಗತಿವಾಹಿನಿ ಸುದ್ದಿ, ಮಂಡ್ಯ
ಮಗನಿಗಾಗಿ ಅವರು ಬರಬಹುದು. ಅಮ್ಮನಿಗಾಗಿ ನೀವು ಬರಬಾರದಾ ಎಂದು ಜೆಡಿಎಸ್ ನಾಯಕರಿಗೆ ತಿವಿದಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ, ವೇದಿಕೆಯಲ್ಲೇ ಕಣ್ಣೀರು ಸುರಿಸಿದರು.
ನಾಮಪತ್ರ ಸಲ್ಲಿಸಿದ ನಂತರ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಯಾರು ಎಂದು ಇವತ್ತು ಹೇಳಬೇಕಾದ ಸ್ಥಿತಿ ಬಂದಿದೆ. ನಾನು ಮಂಡ್ಯದ ಸೊಸೆ. ನೀವೆಲ್ಲ ನನ್ನ ಮಕ್ಕಳಾಗಿ ಇಲ್ಲಿಗೆ ಬಂದಿದ್ದೀರಿ. ಅವರು ಮಗನಿಗಾಗಿ ಇಲ್ಲಿಗೆ ಬಂದು ಪ್ರಚಾರ ಮಾಡುತ್ತಾರೆ. ಅಮ್ಮನಿಗಾಗಿ ನೀವು ಬರಬಾರದಾ ಎಂದು ಪ್ರಶ್ನಿಸಿದರು.
ನಾನು ಕಣ್ಣೀರು ಹಾಕಬಾರದೆಂದು ನಿರ್ಧರಿಸಿದ್ದೇನೆ ಎನ್ನುತ್ತಲೇ ಗದ್ಗದಿತರಾದ ಅವರು ಅಳುತ್ತಲೇ ಮಾತು ಮುಂದುವರಿಸಿದರು. ನನಗೆ ಹೆಸರು ಬೇಕಾಗಿಲ್ಲ. ಏನೂ ಬೇಕಾಗಿಲ್ಲ. ಅಂಬರೀಷ್ ಅವರ ಅಪೂರ್ಣ ಕನಸನ್ನು ಪೂರ್ಣಗೊಳಿಸಲು ಬಂದಿದ್ದೇನೆ. ಅವರು ಇದ್ದಿದ್ದರೆ ಇನ್ನಷ್ಟು ಕೆಲಸ ಮಾಡುವ ಯೋಜನೆ ಹಾಕಿಕೊಂಡಿದ್ದರು. ಅದನ್ನು ಪೂರ್ಣಗೊಳಿಸಬೇಕಾಗಿದೆ. ಹಾಗಾಗಿ ನೀವೆಲ್ಲ ನನ್ನೊಂದಿಗೆ ಇರುವುದಾಗಿ ಮಾತು ಕೊಡಿ ಎಂದು ಕೋರಿದರು.
ನಟರಾದ ದರ್ಶನ್, ಯಶ್, ದೊಡ್ಡಣ್ಣ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಹಲವಾರು ಪ್ರಮುಖರು ಸಹ ಪಾಲ್ಗೊಂಡಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)