ಮಹದಾಯಿ: ಕರ್ನಾಟಕದ ಮನವಿ ವಿಚಾರಣೆಗೆ ಸುಪ್ರಿಂ ಒಪ್ಪಿಗೆ -Breaking News
ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಮಹದಾಯಿ ನದಿ ನೀರಿನ ಹಂಚಿಕೆ ಸಂಬಂಧ ಜಲಪ್ರಾಧಿಕಾರ ನೀಡಿದ್ದ ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ಮಹಾರಾಷ್ಟ್ರ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಲು ಸರ್ವೋಚ್ಛ ನ್ಯಾಯಾಲಯ ಒಪ್ಪಿಗೆ ನೀಡಿದೆ.
ಸೋಮವಾರ ಬೆಳಗ್ಗೆ ನ್ಯಾಯಮೂರ್ತಿ ಚಂದ್ರಚೂಡ ಅವರಿದ್ದ ಸುಪ್ರಿಂ ಕೋರ್ಟ್ ಪೀಠದ ಮುಂದೆ ಈ ಸಂಬಂಧ ವಾದ ವಿವಾದ ನಡೆದು, ಅಂತಿಮವಾಗಿ ಕರ್ನಾಟಕದ ವಾದದ ಕುರಿತು ವಿಚಾರಣೆ ನಡೆಸಲು ಸುಪ್ರಿಂ ಕೊರ್ಟ್ ಒಪ್ಪಿಗೆ ಸೂಚಿಸಿತು.
ಜಲಪ್ರಾಧಿಕಾರ ಕರ್ನಾಟಕಕ್ಕೆ ನೀಡಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. 148 ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಹಾಗಾಗಿ ನಮಗೆ 24.15 ಟಿಎಂಸಿ ನೀರು ಕೊಡಬೇಕು ಎನ್ನುವುದು ಕರ್ನಾಟಕದ ವಾದವಾಗಿದೆ.
ಹೈಡ್ರೋ ಇಲೆಕ್ಟ್ರಿಸಿಟಿಗೆ ಕೇವಲ 8 ಟಿಎಂಸಿ ಕೊಡಲಾಗಿದೆ. ಅದನ್ನು 14.5 ಟಿಎಂಸಿಗೆ ಹೆಚ್ಚಿಸಬೇಕು. ಕಾಳಿ ಯೋಜನೆಗೆ 5.5 ಟಿಎಂ ಸಿ ನೀರು ಬೇಕಿದ್ದು, ಪ್ರಾಧಿಕಾರ ಯಾವುದೇ ಪ್ರಮಾಣದ ನೀರು ಕೊಟ್ಟಿಲ್ಲ. ಕುಡಿಯುವುದಕ್ಕಾಗಿ 7 ಟಿಎಂಸಿ ನೀರು ಬೇಕಿದ್ದು, ಪ್ರಾಧಿಕಾರ ಕೇವಲ 5 ಟಿಎಂಸಿ ನೀಡಿದೆ ಎಂದು ಕರ್ನಾಟಕ ಅಸಮಾಧಾನ ವ್ಯಕ್ತಪಡಿಸಿದೆ.
ಕರ್ನಾಟಕದ ಅಡ್ವಕೇಟ್ ಜನರಲ್ ಉದಯ ಹೊಳ್ಳ, ಹಿರಿಯ ನ್ಯಾಯವಾದಿಗಳಾದ ಶರದ್ ಜವಳಿ, ಮೋಹನ ಕಾತರಕಿ, ಎಂ.ಬಿ.ಜಿರಲಿ ಮೊದಲಾದವರು ಈ ಸಂದರ್ಭದಲ್ಲಿದ್ದರು.




