ಜಿ ಐ ಟಿ ಯಲ್ಲಿ ಸುರತ್ಕಲ್ ನ ಪ್ರತಿಷ್ಠಿತ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಸಹಯೋಗದೊಂದಿಗೆ ವಾಸ್ತವ ಪ್ರಯೋಗಾಲಯ(ವರ್ಚುವಲ್ ಲ್ಯಾಬ)ದ ನೋಡಲ್ ಕೇಂದ್ರ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ( ಜಿ ಐ ಟಿ )ಲ್ಲಿ ಸುರತ್ಕಲ್ ನ ಪ್ರತಿಷ್ಠಿತ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಸಹಯೋಗದೊಂದಿಗೆ ವಾಸ್ತವ ಪ್ರಯೋಗಾಲಯ (ವರ್ಚುವಲ್ ಲ್ಯಾಬೊರೇಟರಿ)ಗಳ ನೋಡಲ್ ಕೇಂದ್ರವನ್ನು ಶುಕ್ರವಾರ ಸುರತ್ಕಲ್ ನ ಪ್ರತಿಷ್ಠಿತ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಶಿವಶಂಕರ್ ಹಿರೇಮಠ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರೇಮಠ ಅವರು, ವಾಸ್ತವ ಪ್ರಯೋಗಾಲಯಗಳು (ವರ್ಚುವಲ್ ಲ್ಯಾಬೊರೇಟರಿಗಳು) ಇದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಪ್ರತಿಷ್ಠಿತ ಕಾರ್ಯಕ್ರಮ ನ್ಯಾಷನಲ್ ಮಿಷನ್ ಆನ್ ಎಜುಕೇಶನ್ ಅಡಿಯಲ್ಲಿ ಪ್ರಾರಂಭವಾದ ಯೋಜನೆ. ಇದರ ಅಡಿಯಲ್ಲಿ ದೇಶದ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐ ಐ ಟಿ ಗಳು) ಮತ್ತು ಏಕೈಕ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ ಐ ಟಿ ಕೆ) ತರಬೇತಿ ಸಂಸ್ಥೆಗಳಾಗಿ ಕೆಲಸ ಮಾಡುತ್ತಿವೆ . ವಾಸ್ತವ ಪ್ರಯೋಗಾಲಯಗಳು (ವರ್ಚುವಲ್ ಲ್ಯಾಬೊರೇಟರಿಗಳು) ವಿಜ್ಞಾನ ಮತ್ತು ತಾಂತ್ರಿಕ ಪಠ್ಯಕ್ರಮದ ಒಂದು ಅವಿಭಾಜ್ಯ ಭಾಗವಾಗುತ್ತಿವೆ – ಅವುಗಳು ವಿದ್ಯಾರ್ಥಿಗಳಿಗೆ ಪ್ರಮುಖ ಪರಿಕಲ್ಪನೆಗಳನ್ನು ಕಂಡುಕೊಳ್ಳಲು ಮತ್ತು ಹೊಸ ಹೊಸ ನಾವಿನ್ಯತೆಗಳಿಗೆ ಮೂರ್ತ ಸ್ವರೂಪ ಕೊಡಲು ಇವುಗಳು ಸಹಾಯ ಮಾಡುತ್ತವೆ ಎಂದು ಹೇಳಿದರು.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ತ್ವರಿತ ಬೆಳವಣಿಗೆಯೊಂದಿಗೆ ವಾಸ್ತವ ಪ್ರಯೋಗಾಲಯಗಳು (ವರ್ಚುವಲ್ ಲ್ಯಾಬೊರೇಟರಿಗಳು) ನೈಜ ಪ್ರಯೋಗಾಲಯಗಳಿಗೆ ಪರ್ಯಾಯವಾಗಿ ಅಥವಾ ಪೂರಕವಾಗಿ ಬಳಸಲಾಗುತ್ತದೆ. ವೈವಿಧ್ಯಮಯ ಸಿಮ್ಯುಲೇಶನ್ ತಂತ್ರಗಳನ್ನು ಬಳಸಿಕೊಂಡು ಹಲವಾರು ಎಂಜಿನಿಯರಿಂಗ್ ಮತ್ತು ವೈಜ್ಞಾನಿಕ ವಿಭಾಗಗಳಲ್ಲಿ ಅಭಿವೃದ್ಧಿಪಡಿಸಲಾದ ಈ ವಾಸ್ತವ ಪ್ರಯೋಗಾಲಯಗಳ(ವರ್ಚುವಲ್ ಲ್ಯಾಬೊರೇಟರಿ)ಗಳು ವಿದ್ಯಾರ್ಥಿಗಳ ಚಿಂತನೆಗೆ ಮತ್ತು ಕಲ್ಪನಾ ಶಕ್ತಿಗೆ ಅನುಗುಣವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತವೆ ಎಂದು ತಿಳಿಸದರು.
ವಾಸ್ತವ ಪ್ರಯೋಗಾಲಯಗಳು (ವರ್ಚುವಲ್ ಲ್ಯಾಬೊರೇಟರಿಗಳು) ಪ್ರಾಮುಖ್ಯತೆಯ ಬಗ್ಗೆ ವಿವರಿಸುವಾಗ, ವಾಸ್ತವ ಪ್ರಯೋಗಾಲಯಗಳನ್ನು ಯಾವುದೇ ಸ್ಥಳದಿಂದ’ ಯಾವುದೇ ಸಮಯದಲ್ಲಿ, ಆನ್ ಲೈನ್ ಲೈನ್ ನಲ್ಲಿ ಬಳಸಬಹುದು ಎಂದು ಹೇಳಿದರು.ಹಾಗೆಯೇ ಒಂದು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳ ಸಮೂಹವನ್ನು ಭೋದಿಸುವಾಗ, ನೈಜ ಪ್ರಯೋಗಾಲಯಗಳು ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ಸಮಸ್ಯೆಯಾಗಿವೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ನಿಭಾಯಿಸಲು ವಾಸ್ತವ ಪ್ರಯೋಗಾಲಯಗಳು ಹೆಚ್ಚು ಸೂಕ್ತವಾಗಿವೆ. ನೈಜ ಪ್ರಯೋಗಾಲಯಕ್ಕೆ ಹೋಲಿಸಿದರೆ ವರ್ಚುವಲ್ ಲ್ಯಾಬೊರೇಟರಿಯನ್ನು ಸ್ಥಾಪಿಸಲು ತಗಲುವ ವೆಚ್ಚ, ಕಾರ್ಯಾಚರಣಾ ಮತ್ತು ನಿರ್ವಹಣೆ ವೆಚ್ಚಗಳು ಬಹಳ ಕಡಿಮೆ. ನೈಜ ಪ್ರಯೋಗಾಲಯಗಳಿಗಿಂತ ಭಿನ್ನವಾಗಿವೆ ಹಾಗೂ ದಿನನಿತ್ಯದ ನಿರ್ವಹಣೆ ವಾಸ್ತವ ಪ್ರಯೋಗಾಲಯಗಳಿಗೆ ಅಗತ್ಯವಿರುವುದಿಲ್ಲ. ಅಸಮರ್ಪಕ ಕ್ರಿಯೆಯ ಕಾರಣದಿಂದಾಗಿ ಹಾನಿಯಾಗುದಿಲ್ಲ ಎಂದು ತಿಳಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಗೌತಮ್ ಪ್ರಭು, ನಿಶಾನ್ ಶೆಟ್ಟಿ ಹಾಗೂ ಕೆ. ಕೆ. ಪ್ರಭಾಕರನ್ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿವರ್ಗಕ್ಕೆ ವಾಸ್ತವ ಪ್ರಯೋಗಾಲಯಗಳನ್ನೂ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪ್ರಾಚಾರ್ಯ ಡಾ. ಆನಂದ್ ದೇಶಪಾಂಡೆ ಅಧ್ಯಕ್ಷೀಯ ಭಾಷಣ ಮಾಡಿದರು. ನೋಡಲ್ ಕೇಂದ್ರದ ಸಂಯೋಜನಾಧಿಕಾರಿ ಡಾ. ಎಂ. ಎಂ.ಮಠ ಸ್ವಾಗತಿಸಿದರು, ಪ್ರೊ. ಜಿ ಏನ್. ಮರಣಹೋಳ್ಕರ ಪರಿಚಯಿಸಿದರು, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಯಂತ ಕಿತ್ತೂರ ವಂದಿಸಿದರು ಹಾಗೂ ಪ್ರೊ. ರೂಪಾ ರಾವ್ ನಿರೂಪಿಸಿದರು.