ಪ್ರಗತಿವಾಹಿನಿ ಸುದ್ದಿ, ಸವದತ್ತಿ :
ಅಂತರ್ಜಲ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಅಂತರ್ಜಲ ಕಚೇರಿ ಬೆಳಗಾವಿ ಹಾಗೂ ಅನಂತ ವಿಶ್ವ ಸೇವಾ ಟ್ರಸ್ಟ್ಗಳ ವತಿಯಿಂದ ಸವದತ್ತಿ ತಾಲೂಕಿನ ಹಾರೂಗೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಅಂತರ್ಜಲದ ಸದ್ಬಳಕೆ, ಸಂರಕ್ಷಣೆ, ಮರುಬಳಕೆ, ಅತಿಬಳಕೆ ನಿಯಂತ್ರಣ, ಗುಣಮಟ್ಟ ಹಾಗೂ ಅಂತರ್ಜಲ ಅಭಿವೃದ್ಧಿ ಪಡಿಸುವ ಮತ್ತು ತೆರೆದ, ತ್ಯಕ್ತ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳದಂತೆ ನಿಯಂತ್ರಿಸುವ ಬಗ್ಗೆ ಜನಜಾಗೃತಿ ಶಿಬಿರ ಆಯೋಜಿಸಲಾಗಿತ್ತು.
ಬೆಳಗಾವಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ. ಉಮೇಶ ಎಂ. ಬಗಾರಿ ಹಾಗೂ ಕರ್ನಾಟಕ ಪ್ರಜ್ವಲ ಸೇವಾ ಸಂಸ್ಥೆಯ ವೈಶಾಲಿ ಬಳುಟಗಿ ನೀರಿನ ಲಭ್ಯತೆ ಹಾಗೂ ಅದರ ಸದ್ಬಳಕೆಗಳ ಬಗ್ಗೆ ಮಾರ್ಗದರ್ಶನ ಮಾಡಿದರು.
ಶಾಲಾ ಮುಖ್ಯಾಧ್ಯಾಪಕ ಶಿವಾಜಿ ಹುದ್ದಾರ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಸದಸ್ಯ ಶಿವಪ್ಪಾ ನೀಲಪ್ಪನವರ ಉದ್ಘಾಟಿಸಿದರು. ಹಿರಿಯ ಭೂ ವಿಜ್ಞಾನಿ ಅರುಣ ಡಿ.ಇ. ಉಪಸ್ಥಿತರಿದ್ದರು. ಎಫ್.ವೈ. ಮಾರಿಹಾಳ ನಿರೂಪಿಸಿದರು.